ಅ.12ರಂದು ಕರಾವಳಿ ಉತ್ಸವ ಮೈದಾನದದಲ್ಲಿ ‘ಪಿಲಿ ನಲಿಕೆ’
ಮಂಗಳೂರು: ಪಿಲಿ ನಲಿಕೆ ಪ್ರತಿಷ್ಠಾನ ಹಾಗೂ ನಮ್ಮ ಟಿವಿಯ ಸಹಯೋಗದಲ್ಲಿ ಈ ಬಾರಿ 9ನೇ ವರ್ಷದ ‘ಪಿಲಿ ನಲಿಕೆ’ ಹುಲಿ ವೇಷ ಸ್ಪರ್ಧೆ ಅ.12ರಂದು ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ. ಈ ಬಾರಿ ಪ್ರತಿಷ್ಠಿತ 11 ತಂಡಗಳು ಭಾಗವಹಿಸಲಿವೆ ಎಂದು ‘ಪಿಲಿನಲಿಕೆ’ ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳುನಾಡಿನ ಸಾಂಪ್ರದಾಯಿಕ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳ ಹುಲಿ ವೇಷದ ಸಂಪ್ರದಾಯ ಹಾಗೂ ಮೂಲ ಸೊಗಡನ್ನು ಉಳಿಸಿ ಬೆಳೆಸುವ ಸದುದ್ದೇಶದಿಂದ ಪ್ರತಿವರ್ಷ ಈ ಪಿಲಿನಲಿಕೆ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಸ್ಪರ್ಧೆಯಲ್ಲಿ ಒಟ್ಟು 18 ಲಕ್ಷ ರೂ.ಬಹುಮಾನ ನಿಗದಿಗೊಳಿಸಲಾಗಿದೆ ಎಂದರು.
ಪ್ರಥಮ ಬಹುಮಾನ ವಿಜೇತ ತಂಡಕ್ಕೆ ರೂ.5 ಲಕ್ಷ ಹಾಗೂ ಪ್ರಶಸ್ತಿ ದೊರೆಯಲಿದೆ. ಅಲ್ಲದೆ ಈ ತಂಡ ಬಹರೇನ್ನ ರಾಷ್ಟ್ರೀಯ ಉತ್ಸವದಲ್ಲಿ ಭಾಗವಹಿಸುವ ಅವಕಾಶ ಪಡೆಯಲಿದೆ. ದ್ವಿತೀಯ ಬಹುಮಾನ 3 ಲಕ್ಷ ರೂ ಮತ್ತು ತೃತೀಯ ಬಹುಮಾನ 2 ಲಕ್ಷ ನಿಗದಿಪಡಿಸಲಾಗಿದೆ. ಪ್ರತಿ ತಂಡಕ್ಕೆ 50 ಸಾವಿರ ರೂ. ಗೌರವಧನ ನೀಡಲಾಗುವುದು. ಕಪ್ಪು ಹುಲಿ, ಮರಿ ಹುಲಿ, ತಾಸೆ ತಂಡ, ಮುಡಿ ಬಿಸಾಡುವುದು, ಬಣ್ಣಗಾರಿಕೆ ಸೇರಿದಂತೆ 6 ವೈಯಕ್ತಿ ಪ್ರಶಸ್ತಿಗಳಿಗೆ 50 ಸಾವಿರ ಬಹುಮಾನ ಹಾಗೂ ಫಲಕ ನೀಡಲಾಗುವುದು ಎಂದವರು ತಿಳಿಸಿದರು.
ಈ ಬಾರಿಯ ಪಿಲಿ ನಲಿಕೆಗೆ ಮೆರುಗು ನೀಡಲು ಖ್ಯಾತ ನಟ ರಿಷಬ್ ಶೆಟ್ಟಿ, ಡಾಲಿ ಧನಂಜಯ್, ರಾಜ್ ಶೆಟ್ಟಿ, ಬಾಲಿವುಡ್ ನಟ ಅಹನ್ ಶೆಟ್ಟಿ, ಕ್ರಿಕೆಟ್ ತಾರೆ ಶಿವಂ ದುಬೆ ಮುಂತಾದವರು ಆಗಮಿಸಲಿದ್ದಾರೆ.
ವಿದ್ಯಾನಿಧಿ..
ಪಿಲಿ ನಲಿಕೆ ಸ್ಪರ್ಧೆಗೆ ಆಯ್ಕೆಯಾದ ಪ್ರತಿ ತಂಡದಲ್ಲಿ ಒಬ್ಬ ಬಡ ವಿದ್ಯಾರ್ಥಿಯನ್ನು ಆಯ್ಕೆ ಮಾಡಿ ಆತ ವೃತ್ತಿ ಶಿಕ್ಷಣ, ಉನ್ನತ ಶಿಕ್ಷಣ ಪಡೆಯುತ್ತಿದ್ದರೆ ಅಂತವರಿಗೆ 25 ಸಾವಿರದಿಂದ 1 ಲಕ್ಷ ರೂ.ವರೆಗೆ ವಿದ್ಯಾನಿಧಿ ನೀಡಲು ಪ್ರತಿಷ್ಠಾನ ನಿರ್ಧರಿಸಿದೆ.
ನಮ್ಮ ಟಿವಿ ಆಡಳಿತ ನಿರ್ದೇಶಕ ಪಿಲಿ ನಲಿಕೆ ತಂಡದ ಪ್ರಮುಖರಾದ ನವೀನ್ ಶೆಟ್ಟಿ ಎಡ್ಮೆಮಾರ್, ಅವಿನಾಶ್, ವಿಕಾಸ್ ಶೆಟ್ಟಿ ಉಪಸ್ಥಿತರಿದ್ದರು.