ಪೊಲೀಸ್ ಎಂದು ನಂಬಿಸಿ ದಲಿತ ವ್ಯಕ್ತಿಗೆ ಬ್ಲ್ಯಾಕ್‌ಮೇಲ್!

ಪೊಲೀಸ್ ಎಂದು ನಂಬಿಸಿ ದಲಿತ ವ್ಯಕ್ತಿಗೆ ಬ್ಲ್ಯಾಕ್‌ಮೇಲ್!


ಮಂಗಳೂರು: ಗಂಜಿಮಠ ಮೂಡುಪೆರಾರದ ಗ್ರಾಮದ ವಿಠಲ ಎಂಬ ದಲಿತ ಸಮುದಾಯದ ವ್ಯಕ್ತಿಗೆ ಮಹಾಲಕ್ಷ್ಮಿ ಹೆಸರಿನಲ್ಲಿ ಪೊಲೀಸ್ ಪೇದೆ ಎಂದು ಹೇಳಿಕೊಂಡು ಬ್ಲ್ಯಾಕ್‌ಮೇಲ ಮಾಡಿದ ಘಟನೆ ನಡೆದಿದ್ದು, ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ಡಿಸಿಪಿ ಸಿದ್ಧಾರ್ಥ ಗೋಯಲ್ ಅಧ್ಯಕ್ಷತೆಯಲ್ಲಿ ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ದಲಿತ ಮುಖಂಡರು ಈ ದುಗುಡ ವ್ಯಕ್ತಪಡಿಸಿದರು.

ವಿಠಲ ಅವರ ಮೊಬೈಲ್‌ಗೆ ಪೊಲೀಸ್ ಪೇದೆ ಎಂದು ಹೇಳಿಕೊಂಡು ಕರೆ ಮಾಡಿದ ಮಹಿಳೆ, ಬಜಾಜ್ ಫೈನಾನ್ಸ್‌ನಿಂದ ಪಡೆದ ಸಾಲದ ಬಡ್ಡಿ 22000 ರೂ. ಆಗಿದ್ದು, ಅದನ್ನು ಪಾವತಿಸಬೇಕು ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದರು. ಫೈನಾನ್ಸ್‌ನಿಂದ ಸಾಲ ಪಡೆದ ಹಣವನ್ನು ಪೂರ್ತಿಯಾಗಿ ಪಾವತಿಸಿರುವುದಾಗಿ ತಿಳಿಸಿದರೂ, ಕೋರ್ಚ್ ನೋಟೀಸು ಬಂದಿದೆ. ಬಾಕಿ ಬಡ್ಡಿ ಹಣ ಕಟ್ಟದಿದ್ದರೆ ಮನೆಗೆ ಬಂದು ಬಂಧಿಸುವುದಾಗಿ ಬೆದರಿಕೆ ಒಡ್ಡಲಾಗಿದೆ. ಈ ಬಗ್ಗೆ ಸಂತ್ರಸ್ತ ವಿಠಲ ಅವರು ಸ್ಥಳೀಯ ಠಾಣೆಗೆ ವಿಚಾರಿಸಿದಾಗ ಅಲ್ಲಿ ಆ ಹೆಸರಿನ ಪೊಲೀಸ್ ಯಾರೂ ಇರುವುದಿಲ್ಲ ಎಂದು ತಿಳಿಸಿದ್ದಾರೆ. ಬಳಿಕ ಆ ಪೊಲೀಸ್ ಪೇದೆಗೆ ಕರೆ ಮಾಡಿದರೆ ಕರೆ ಸ್ವೀಕರಿಸಿಲ್ಲ. ಫೈನಾನ್ಸ್ ಕಂಪನಿಯಲ್ಲಿಯೂ ಬಾಕಿ ಬಗ್ಗೆ ವಿಚಾರಿಸಿದರೆ, ಅಂತಹ ಯಾವುದೇ ವಿಚಾರ ಇಲ್ಲವೆಂದು ತಿಳಿದು, ಇದು ಮೋಸದ ಕರೆಯಾಗಿದ್ದು, ಪೊಲೀಸ್ ಹೆಸರು ಹೇಳಿಕೊಂಡು ಈ ರೀತಿ ಬೆದರಿಕೆ ಒಡ್ಡಿರುವವರನ್ನು ಪತ್ತೆಹಚ್ಚಿ ಕ್ರಮ ವಹಿಸಬೇಕು ಎಂದು ಎಸ್.ಪಿ. ಆನಂದ್ ಪ್ರಕರಣದ ಬಗ್ಗೆ ವಿವರ ನೀಡಿದರು.

ನಗರದ ಪುರಭವನದಲ್ಲಿ ಆಗಸ್ಟ್ 24ರಂದು ನಡೆದ ತುಳು ಜಾನಪದ ನೃತ್ಯ 2024 ಕಾರ್ಯಕ್ರಮದಲ್ಲಿ ದಲಿತ ಸಮುದಾಯಕ್ಕೆ ಅವಮಾನ ಮಾಡುವ  ನಿಷೇಧಿತ ಜಾತಿ ನಿಂದನೆ ಪದವನ್ನು ಬಳಕೆ ಮಾಡಲಾಗಿದೆ ಎಂಬ ಆರೋಪ ವ್ಯಕ್ತವಾಗುತ್ತಿದೆ ಎಂದು ದಲಿತ ನಾಯಕ ಎಸ್.ಪಿ. ಆನಂದ್‌ರವರು ಈ ಆರೋಪ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದರು.

ಜಾತಿ ನಿಂದಕ ಕೆಲವೊಂದು ಪದಗಳನ್ನು ಬಳಕೆ ಮಾಡದಂತೆ ಸರ್ವೋಚ್ಛ ನ್ಯಾಯಾಲಯ ಹಾಗೂ ಸರಕಾರದ ಆದೇಶವಿದ್ದರೂ ಸಾರ್ವಜನಿಕ ನೃತ್ಯ ಕಾರ್ಯಕ್ರಮದಲ್ಲಿ ನಾಡಿನ ಹಿರಿಯ ವ್ಯಕ್ತಿಗಳ ಉಪಸ್ಥಿತಿಯಲ್ಲಿಯೇ ದಲಿತ ಸಮುದಾಯಕ್ಕೆ ಜಾತಿ ನಿಂದನೆಯ ಪದ ಬಳಕೆಯ ಮೂಲಕ ಅವಮಾನ ಮಾಡಲಾಗಿದೆ. ಪಣಂಬೂರಿನಲ್ಲಿ ಸುಮಾರು 10 ವರ್ಷಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿಯೂ ಈ ರೀತಿ ಜಾತಿ ನಿಂದಕ ಪದ ಬಳಕೆ ಮಾಡಿದ್ದರ ವಿರುದ್ಧ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿತ್ತು. ಹಾಗಿದ್ದರೂ ಮತ್ತೆ ಮತ್ತೆ ಇಂತಹ ಸಾರ್ವಜನಿಕವಾಗಿ ಪದಗಳ ಬಳಕೆ ಮಾಡುತ್ತಿರುವುದು ಬೇಸರರದ ಸಂಗತಿ ಎಂದು ಎಸ್.ಪಿ. ಆನಂದ್ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಈ ಬಗ್ಗೆ ವೀಡಿಯೋ ದಾಖಲೆಯೊಂದಿಗೆ ದೂರು ನೀಡುತ್ತಿದ್ದು, ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ದೂರಿನ ಮೇರೆಗೆ ಕಾನೂನು ತಜ್ಞರ ಸಲಹೆ ಪಡೆದು ಕ್ರಮ ವಹಿಸುವುದಾಗಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಡಿಸಿಪಿಗಳಾದ ಸಿದ್ಧಾಥ್‌ರ್ ಗೋಯಲ್ ಹಾಗೂ ದಿನೇಶ್ ಕುಮಾರ್ ತಿಳಿಸಿದರು.

ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿದ್ದು, ಪ್ರಕರಣಗಳು ದಾಖಲಾಗುತ್ತಿದ್ದರೂ, ಪ್ರತಿನಿತ್ಯ ಸುಮಾರು 20ರಷ್ಟುಲಾರಿಗಳಲ್ಲಿ ಮರಳು ಸಾಗಾಟ ಮುಂದುವರಿದಿದೆ. ದಲಿತ ಕಾಲನಿಯ ಸಮೀಪದಿಂದಲೇ ಇದು ನಡೆಯುತ್ತಿದೆ ಎಂದು ರಾಮಚಂದ್ರ ಮುಲ್ಕಿ ಎಂಬವರು ದೂರಿದರು.

ಇತ್ತೀಚೆಗಷ್ಟೇ 4 ದೋಣಿ ಹಾಗೂ ಲಾರಿಗಳನ್ನು ವಶಕ್ಕೆ ಪಡೆದು ಕ್ರಮ ವಹಿಸಲಾಗಿದೆ ಎಂದು ಎಸಿಪಿ ಶ್ರೀಕಾಂತ್ ಸಭೆಯಲ್ಲಿ ತಿಳಿಸಿದರು.

ಪ್ರಕರಣಗಳು ದಾಖಲಾಗುತ್ತಿದ್ದರೂ, ಪೊಲೀಸ್ ಪೇದೆಗಳು ಆ ಪ್ರದೇಶದಲ್ಲಿ ಕಾವಲು ಇದ್ದಾರೆಂದು ಹೇಳಲಾಗುತ್ತಿದ್ದರೂ ಅಕ್ರಮ ಸಾಗಾಟ ಪುನರಾವರ್ತನೆ ಆಗುತ್ತಿದೆ  ಎಂದರೆ ಏನರ್ಥ? ನಮಗೆ ಈ ಬಗ್ಗೆ ದೂರು ನೀಡಿ ನೀಡಿ ಸಾಕಾಗಿದೆ. ಸಂಬಂಧಪಟ್ಟಇಲಾಖೆಗಳಿಗೆ ಇದನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ ಎಂದಾದರೆ ಇನ್ನು ಮುಂದೆ  ನಾವು ದೂರು ನೀಡುವುದಿಲ್ಲ ಎಂದು ದಲಿತ ನಾಯಕ ಸದಾಶಿವ ಉರ್ವಾಸ್ಟೋರ್‌ರವರು ಅಸಮಾಧಾನ ವ್ಯಕ್ತಪಡಿಸಿದರು.

ದಲಿತ ಸಮುದಾಯದ ಮಕ್ಕಳ ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ಹಾಸ್ಟೆಲ್‌ಗಳ ಕೊರತೆಯಿಂದ ಸಮಸ್ಯೆಯಾಗುತ್ತಿದೆ. ಕಳೆದ ವರ್ಷವೂ ಹಾಸ್ಟೆಲ್‌ಗಾಗಿ ಅರ್ಜಿ ಸಲ್ಲಿಸಿದ್ದ ದಲಿತ ವಿದ್ಯಾರ್ಥಿ ಹಾಸ್ಟೆಲ್‌ನಿಂದ ವಂಚಿತನಾಗಿ ಈ ವರ್ಷ ಮತ್ತೆ ಅರ್ಜಿ ಸಲ್ಲಿಸಿ ಆಯ್ಕೆಯಾಗಿದ್ದ ಆದರೆ ಹಾಸ್ಟೆಲ್ ಲಭ್ಯವಾಗದೆ ಆತ ಪಿಜಿಯಲ್ಲಿದ್ದು, ತಿಂಗಳಿಗೆ ಸುಮಾರು 6000 ರೂ. ಬಾಡಿಗೆ ನೀಡಿ ಶಿಕ್ಷಣ ಪಡೆಯುವಂತಾಗಿದೆ. ಸರಕಾರ ದಲಿತರ ಉನ್ನತ ಶಿಕ್ಷಣಕ್ಕೆ ಸಾಕಷ್ಟು ಖರ್ಚು ಮಾಡುತ್ತಿದ್ದರೂ ಅದು ಅರ್ಹರಿಗೆ ಲಭ್ಯವಾಗದಿ ದ್ದರೆ ಏನು ಪ್ರಯೋಜನ ಎಂದು ದಲಿತ ಮುಖಂಡ ಎಸ್.ಪಿ. ಆನಂದ ದೂರಿದಾಗ, ಈ ಬಗ್ಗೆ ಸಂಬಂಧಪಟ್ಟಇಲಾಖೆಯ ಗಮನ ಸೆಳೆಯುವುದಾಗಿ ಡಿಸಿಪಿ ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article