
ಗೆಡ್ಡೆಗೆಣಸು, ಸೊಪ್ಪು ಮೇಳಕ್ಕೆ ಚಾಲನೆ: ಕಂದಮೂಲಗಳನ್ನು ಸಂರಕ್ಷಿಸುವ ಕೆಲಸಗಳು ಆಗಬೇಕಾಗಿದೆ: ಶ್ರೀಪಡ್ರೆ
ಮಂಗಳೂರು: ಆಧುನಿಕತೆಗೆ ಬೆನ್ನುಬಿದ್ದು ಆರೋಗ್ಯಕರ ಬದುಕನ್ನು ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಔಷಧೀಯ ಗುಣಗಳುಳ್ಳ ಗಡ್ಡೆಗೆಣಸು, ಸೊಪ್ಪುಗಳ ಮಹತ್ವದ ಬಗ್ಗೆ ಅರಿವು ಹೊಂದಬೇಕು. ಇವುಗಳನ್ನು ನಿತ್ಯ ಉಪಯೋಗಿಸುವ ಬಗ್ಗೆ ಅಭಿಯಾನವನ್ನು ಕೈಗೊಳ್ಳಬೇಕು ಎಂದು ಅಂತರ್ಜಲ ತಜ್ಞ ಶ್ರೀಪಡ್ರೆ ಹೇಳಿದರು.
ನಗರದ ಸಂಘನಿಕೇತನದಲ್ಲಿ ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ಆಶ್ರಯದಲ್ಲಿ ಕೇಶವ ಸ್ಮೃತಿ ಸಂವರ್ಧನ ಸಮಿತಿ, ಶ್ರೀಸರಸ್ವತಿ ಚಾರಿಟೇಬಲ್ ಟ್ರಸ್ಟ್ ಮತ್ತು ಹಲವು ಸಂಘಸಂಸ್ಥೆಗಳ ಸಹಕಾರದಲ್ಲಿ ಶನಿವಾರ ಎರಡು ದಿನಗಳ ಅಂತರ್ರಾಜ್ಯ ಮಟ್ಟದ ಗೆಡ್ಡೆಗೆಣಸು, ಸೊಪ್ಪು ಮೇಳದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಕುಳಿತಲ್ಲಿಗೆ ಆಹಾರ ಪೂರೈಕೆಯಾಗುವ ಇಂದಿನ ಕಾಲದಲ್ಲಿ ಕಂದಮೂಲಗಳನ್ನು ಸಂರಕ್ಷಿಸುವ ಕೆಲಸಗಳು ಆಗಬೇಕಾಗಿದೆ. ಈ ದಿಶೆಯಲ್ಲಿ ಕಂದಮೂಲ ಮೇಳ ಆರಂಭಿಕ ದಿಟ್ಟ ಹೆಜ್ಜೆಯಾಗಿದೆ. ಆಧುನಿಕತೆಯ ಆಹಾರ ಪದ್ಧತಿಯನ್ನು ಬಳಸುವ ಮೂಲಕ ಸಂಪಾದನೆಯ ಬಹುಅಂಶವನ್ನು ಅನಾರೋಗ್ಯ ಕಾರಣ ಆಸ್ಪತ್ರೆಗೆ ಸುರಿಯುವಂತಾಗಿದೆ. ರೋಗನಿರೋಧಕ ಶಕ್ತಿ ಇರುವ ಗೆಡ್ಡೆಗೆಣಸು, ಸೊಪ್ಪುಗಳನ್ನು ದೈನಂದಿನ ಜೀವನದಲ್ಲಿ ಉಪಯೋಗಿಸಿದರೆ, ಕನಿಷ್ಠ ರೋಗದಿಂದ ದೂರ ಇರಲು ಸಾಧ್ಯವಿದೆ. ಅದಕ್ಕಾಗಿ ಗಡ್ಡೆಗೆಣಸು, ಸೊಪ್ಪು ಬೆಳೆಸುವ ಪ್ಯಾಕೆಜ್ ಮಾಡಿಕೊಟ್ಟರೆ, ಎಲ್ಲರ ಮನೆಗಳಲ್ಲೂ ಕಂದಮೂಲ ಬೆಳೆಸಲು ಅನುಕೂಲವಾಗಲಿದೆ, ಇದನ್ನು ಅಭಿಯಾನವಾಗಿ ಮಾರ್ಪಡಿಸಬೇಕು ಎಂದರು.
ಕಾಸರಗೋಡು ಉಪ್ಪಳ ಕೊಂಡೆವೂರು ಮಠದ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ದೀಪ ಬೆಳಗಿಸಿ, ಗೆಡ್ಡೆಗೆಣಸನ್ನು ತುಂಡರಿಸುವ ಮೂಲಕ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಧಾರ್ಮಿಕ ಕೇಂದ್ರಗಳಲ್ಲೂ ಸಾವಯವ ಕೃಷಿ ಕಾರ್ಯಕ್ಕೆ ಮುಂದಾಗಬೇಕು. ಹಡಿಲು ಬಿದ್ದ ಜಮೀನಿನಲ್ಲಿ ಕೃಷಿ ನಡೆಸಬೇಕು. ಪ್ರತಿ ಮನೆಯು ವಿಷ ರಹಿತ ಅಡುಗೆ ಮನೆ ಆಗಬೇಕು ಎಂದು ಆಶಿಸಿದರು.
ಬದುಕಿನಲ್ಲಿ ಲಾಭ, ನಷ್ಟದ ಲೆಕ್ಕಾಚಾರ ಹಾಕುವ ಮಂದಿ ಕೃಷಿ ಮಾಡಿದರೆ ನಷ್ಟ, ಅದರಲ್ಲೂ ಸಾವಯವ ಕೃಷಿ ಮಾಡಿದರೆ ಇನ್ನೂ ನಷ್ಟ ಎನ್ನುತ್ತಾರೆ. ಕೃಷಿಯಲ್ಲಿ ತಾಪತ್ರಯ ಕಾಣಿಸಿದರೆ ಪೋಷಕಾಂಶ ಕೊರತೆ ಅಥವಾ ರೋಗ ಬಂದಿರಬಹುದು ಎಂದು ಭಾವಿಸಬಹುದು. ಆದರೆ ಆರೋಗ್ಯಕರ ಬದುಕನ್ನು ಅನಾರೋಗ್ಯ ಕಿತ್ತುಕೊಂಡರೆ ಏನೂ ಮಾಡಲು ಸಾಧ್ಯವಿಲ್ಲ. ದುಡಿದ ಹಣವನ್ನೆಲ್ಲ ಚಿಕಿತ್ಸೆಗೆ ಬಳಸಿದರೆ ಮಾನವನಿಗೆ ನೆಮ್ಮದಿ ಎಲ್ಲಿಂದ ಸಿಗಬೇಕು? ಕೃಷಿಯ ಲಾಭದ ಲೆಕ್ಕಾಚಾರವನ್ನು ಕೃಷಿಯ ಆರಂಭದಿಂದ ಫಸಲು ಬರುವಲ್ಲಿವರೆಗೆ ಸೇವಿಸಿದ ಬಳಿಕ ನಾವು ಆರೋಗ್ಯದಿಂದ ಇರುವಲ್ಲಿ ವರೆಗೆ ಲೆಕ್ಕಾಚಾರ ಹಾಕಬೇಕು. ಆಗ ಕೃಷಿಯ ಮಹತ್ವದ ಅರಿವು ಉಂಟಾಗಲು ಸಾಧ್ಯ ಎಂದರು.
ಗೆಡ್ಡೆಗೆಣಸು, ಸೊಪ್ಪು ಮೇಳದ ಪ್ರದರ್ಶನಕ್ಕೆ ಚಾಲನೆ ನೀಡಿದ ದ.ಕ. ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ಸುಚರಿತ ಶೆಟ್ಟಿ ಮಾತನಾಡಿ, ನಮ್ಮ ಆರೋಗ್ಯಕರ ಬದುಕು ಕಟ್ಟಿಕೊಳ್ಳಲು ಕಂದಮೂಲಗಳ ಆಹಾರವನ್ನು ಸೇವಿಸುವ ಪರಿಪಾಠ ರೂಢಿಸಿಕೊಳ್ಳಬೇಕು. ಹಾಲು ಉತ್ಪಾದಕರ ಒಕ್ಕೂಟ ಕೂಡ ಹಸಿರು ಮೇವು, ಸೊಪ್ಪು ಉತ್ಪಾದನೆಗೆ ಒತ್ತು ನೀಡುತ್ತಿದೆ, ಗೊಬ್ಬರ ಸೊಪ್ಪು ಒಣಗಿಸಿ ಜಾನುವಾರುಗಳಿಗೆ ನೀಡುವುದರಿಂದ ಗುಣಮಟ್ಟದ ಹಾಲು ನೀಡಲು ಸಾಧ್ಯವಿದೆ. ರೋಗನಿರೋಧಕ ಶಕ್ತಿಗೆ ಹೆಚ್ಚಿನ ಗೆಡ್ಡೆಗೆಣಸು ಸೇವಿಸಬೇಕು ಎಂದರು.
ಗೆಡ್ಡೆಗೆಣಸು, ಸೊಪ್ಪು ಕೃಷಿ ಕುರಿತ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದ ಸರಸ್ವತಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ಅಧ್ಯಕ್ಷ ಎಸ್. ಮನೆಗಳಲ್ಲಿ ವಿಷಯುಕ್ತ ಆಹಾರ ತಯಾರಾಗುತ್ತಿದೆ. ಕಳೆದ 200 ವರ್ಷಗಳಿಂದ ಭಾರತದಲ್ಲಿ ಬದಲಾವಣೆಯಾಗುತ್ತಿದ್ದರೂ ಜಗತ್ತು ಮಾತ್ರ ಭಾರತದ ಎಲ್ಲ ಮೌಲ್ಯಗಳಿಗೆ ಒತ್ತು ನೀಡುತ್ತಿದೆ. ಋಷಿ ಮತ್ತು ಕೃಷಿ ಸಂಸ್ಕೃತಿ ಒಟ್ಟಾದರೆ ಖುಷಿ ಮೇಳೈಸುತ್ತದೆ. ಮುಂದಿನ ದಿನಗಳಲ್ಲಿ ಕರಾವಳಿಯ ಶಾಲೆಗಳಲ್ಲೂ ಕಂದಮೂಲಗಳ ಅರಿವು ಕಾರ್ಯಕ್ರಮ ನಡೆಯಲಿದೆ ಎಂದರು.
ಕಂದಮೂಲ ಮೇಳದ ಗೌರವಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಮಾತನಾಡಿದರು. ಕಂದಮೂಲ ಅಧ್ಯಕ್ಷ ಪ್ರಭಾಕರ ಶರ್ಮಾ ಅಧ್ಯಕ್ಷತೆ ವಹಿಸಿದ್ದರು. ಆರ್ಎಸ್ಎಸ್ ದಕ್ಷಿಣ ಮಧ್ಯಕ್ಷೇತ್ರಿಯ ಸಂಘ ಚಾಲಕ ಡಾ. ವಾಮನ ಶೆಣೈ ಧ್ವಜಾರೋಹಣ ನೆರವೇರಿಸಿದರು.
ಸಾವಯವ ಕೃಷಿ ಗ್ರಾಹಕ ಬಳಗ ಗೌರವಾಧ್ಯಕ್ಷ ಅಡ್ಡೂರು ಕೃಷ್ಣ ರಾವ್, ಕಂದಮೂಲ ಕಾರ್ಯಾಧ್ಯಕ್ಷ ಜಿ.ಆರ್.ಪ್ರಸಾದ್, ಕಾರ್ಯದರ್ಶಿ ರತ್ನಾಕರ ಕುಳಾಯಿ, ಕೋಶಾಧಿಕಾರಿ ಶರತ್ ಕುಮಾರ್ ಉಪಸ್ಥಿತರಿದ್ದರು.
ಭರತ್ರಾಜ್ ಸೊರಕೆ ಹಾಗೂ ಜಯಶ್ರೀ ಪ್ರವೀಣ್ ನಿರೂಪಿಸಿದರು.