
ಭಾರತವು ಜಗತ್ತಿನ ಅಧ್ಯಾತ್ಮಿಕ ಕೇಂದ್ರದಂತಿದ್ದು, ಧರ್ಮಸ್ಥಳವು ಅದಕ್ಕೆ ಕೀರ್ತಿ ಕಳಶದಂತಿದೆ: ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್
Tuesday, January 7, 2025
ಉಜಿರೆ: ಭಾರತವು ಜಗತ್ತಿನ ಅಧ್ಯಾತ್ಮಿಕ ಕೇಂದ್ರದಂತಿದ್ದು, ಧರ್ಮಸ್ಥಳವು ಅದಕ್ಕೆ ಕೀರ್ತಿ ಕಳಶದಂತಿದೆ. ಲಕ್ಷಾಂತರ ಜನರು ದೇವರನ್ನು ಹರಸಿ ಇಲ್ಲಿಗೆ ಬರುತ್ತಾರೆ ಅಂತವರಿಗೆ ಅತ್ಯಾಧುನಿಕ ಸೌಲಭ್ಯದೊಂದಿಗೆ ಧಾರ್ಮಿಕತೆ, ಉತ್ಕೃಷ್ಟತೆ, ಸೌದಾರ್ಯತೆ ಇಲ್ಲಿದೆ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಹೇಳಿದರು.
ಅವರು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವಳ ಸರತಿ ಸಾಲಿನ ನೂತನ ಸಂಕೀರ್ಣ ‘ಶ್ರೀ ಸಾನಿಧ್ಯ’ ಹಾಗೂ ೨೦೨೪-೨೫ನೇ ಸಾಲಿನ ಜ್ಞಾನದೀಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದ ಧಾರ್ಮಿಕ ಕ್ಷೇತ್ರಗಳು ವೈಯಕ್ತಿಕ ನಂಬಿಕೆಗೂ ಮೀರಿದ್ದಾಗಿವೆ. ಅವುಗಳು ಸಮುದಾಯ ಸೇವೆಯ ಕೇಂದ್ರಗಳಾಗಿವೆ. ಅದರಲ್ಲೂ ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಧರ್ಮಸ್ಥಳದ ಕೊಡುಗೆ ಅಪಾರವಾಗಿದೆ. ಭಾರತವು ಗ್ರಾಮೀಣ ದೇಶವಾಗಿದ್ದು, ಅದರ ಅಭಿವೃದ್ಧಿ ಮೂಲಕ ದೇಶದ ಅರ್ಥಿಕತೆ ನಿರ್ಧಾರವಾಗುತ್ತದೆ. ರಾಜ್ಯದ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿಯ ಕೆಲಸವನ್ನು ಶ್ರೀ ಕ್ಷೇತ್ರ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ಭಾರತವು ಸಂಸ್ಕೃತಿಯ ನಾಡಾಗಿದ್ದು, ಜಗತ್ತಿನ ಆರನೇ ಒಂದು ಭಾಗ ಜನಸಂಖ್ಯೆ ಇಲ್ಲಿದೆ. ಭಾರತವು ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದೆ. 2027ಕ್ಕೆ ಭಾರತವನ್ನು ಅಭಿವೃದ್ಧಿಯಾದ ದೇಶವಾಗಿಸುವುದಷ್ಟೇ ನಮ್ಮ ಗುರಿ ಅಲ್ಲ, ಅದು ಉದ್ದೇಶವಾಗಿರಬೇಕು. ವೈಯಕ್ತಿಕವಾಗಿ ದೇಶಕ್ಕೆ ಕೊಡುಗೆ ನೀಡುವ ಮೂಲಕ ಇದನ್ನು ಸಾಧ್ಯವಾಗಿಸಬಹುದು ಎಂದು ಹೇಳಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಸ್ವಾಗತಿಸಿ, ಮಾತನಾಡಿ, ‘ಭಕ್ತಾದಿ ದೇವೋಭವ’ ಎನ್ನುವ ತತ್ವದಲ್ಲಿ ಬೇರೂರಿರುವ ಸಂಕೀರ್ಣದ ಮೂಲ ಅಡಿಪಾಯವನ್ನು ಒತ್ತಿಹೇಳಿದರು. ಭಕ್ತರಿಗೆ ದೇವರ ದರ್ಶನದ ವೇಳೆ ಆರಾಮದಾಯಕ ಮತ್ತು ಉತ್ತಮ ವಾತಾವರಣವನ್ನು ಒದಗಿಸುವ ಮೂಲಕ, ನೂತನ ಸಂಕೀರ್ಣದೊಳಗಿನ ವಿವಿಧ ಸೌಲಭ್ಯಗಳು ಪ್ರತಿಯೊಬ್ಬ ಭಕ್ತನಿಗೆ ದೈವಿಕ ಹಾಗೂ ಆಧ್ಯಾತ್ಮಿಕ ವಾತಾವರಣ ಅನುಭವನ್ನು ಹೊಂದಲು ಸಹಕಾರಿಯಾಗಿದೆ ಎಂದರು.
ಈ ಸಂದರ್ಣದಲ್ಲಿ ಗ್ರಾಮೀಣ ಭಾಗದಲ್ಲಿ ಶಿಕ್ಷಣದ ಗುಣಮಟ್ಟವನ್ನು ಉತ್ತಮಗೊಳಿಸುವ ಉದ್ದೇಶದಿಂದ ಜ್ಞಾನ ದೀಪ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ೨೦೨೪-೨೫ ಸಾಲಿನ ಜ್ಞಾನದೀಪ ಯೋಜನೆಯನ್ನು ಜಗದೀಪ್ ಧನ್ಕರ್ ಅವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಶುಭಾಹಾರೈಸಿದರು.
ಉಪ ರಾಷ್ಟ್ರಪತಿ ಜಗದೀಪ್ ದನ್ಕರ್ ಪತ್ನಿ ಡಾ. ಸುದೇಶ್ ಧನ್ಕರ್, ಡಾ. ಹೇಮಾವತಿ ವಿ. ಹೆಗ್ಗಡೆ, ಸಂಸದ ಬ್ರಿಜೇಶ್ ಚೌಟ, ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಎಸ್ಡಿಎಂ ಕಾಲೇಜಿನ ಪ್ರಾಧ್ಯಾಪಕ ಡಾ. ಶ್ರೀಧರ ಭಟ್ ನಿರೂಪಿಸಿದರು.