
ಉಚ್ಚಿಲ ಹೆದ್ದಾರಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅಪಘಾತ ತಡೆಗೆ ಸೂಕ್ತ ಕ್ರಮ
ಕಾಪು: ಕಾಪು ತಾಲೂಕಿನ ಉಚ್ಚಿಲ ಪೇಟೆಯ ಹೆದ್ದಾರಿಯಲ್ಲಿ ನಿರಂತರ ಅಪಘಾತ ಮತ್ತು ಸಾವಿನ ಸಂಖ್ಯೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸುವ ಬಗ್ಗೆ ಜಿಲ್ಲಾಧಿಕಾರಿಯವರು ಹೆಚ್ಚುವರಿ ಎಸ್ಪಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಯಿತು. ಸಮಿತಿಯು ಸ್ಥಳ ಪರಿಶೀಲನೆ ನಡೆಸಿ ವರದಿ ಕೊಡಲು ಆದೇಶಿಸಿರುತ್ತಾರೆ. ಅದರಂತೆ ಇಂದು ತಹಶಿಲ್ದಾರ್ ಕಚೇರಿಯಲ್ಲಿ ಸಮಿತಿಯು ಸಭೆ ಸೇರಿ ಸಮಾಲೋಚನೆ ಮಾಡಲಾಯಿತು.
ನಂತರ ನಿರಂತರ ಅಪಘಾತ ಸಂಭವಿಸುತ್ತಿರುವ ಉಚ್ಚಿಲ ಪೇಟೆಯ ಹೆದ್ದಾರಿಗೆ ಭೇಟಿ ನೀಡಿ ಸ್ಥಳ ಪರಿಸೀಲನೆ ನಡೆಸಲಾಯಿತು.
ರಸ್ತೆಯಲ್ಲಿರುವ ಪ್ರಸ್ತುತ ಬೀದಿ ದೀಪಗಳನ್ನು ತೆಗೆದು ಹೆಚ್ಚು ಪ್ರಖರ ಬೀದಿ ದೀಪಗಳನ್ನು ಅಳವಡಿಸತಕ್ಕದ್ದು., ರಸ್ತೆಯ ಮದ್ಯ ಉಚ್ಚಿಲ ಪೇಟೆಯಲ್ಲಿ 200 ಎಂ ಬ್ಯಾರಿಕೇಡ್ ನಿರ್ಮಿಸಿ ಜನರು ರಸ್ತೆ ದಾಟಲು ವ್ಯವಸ್ಥೆ ಮಾಡಿಕೊಡುವುದು., ಉಚ್ಚಿಲ ಪೇಟೆ ಮದ್ಯ ಭಾಗದಲ್ಲಿ ರಸ್ತೆ ಮೀಡಿಯನ್ ಓಪನ್ ಮಾಡಲು ಕ್ರಮವಹಿಸತಕ್ಕದ್ದು., ರಸ್ತೆಯಲ್ಲಿ ಬ್ಲಿಂಕರ್ಗಳು, ಸುರಕ್ಷತಾ ಸೂಚನಾ ಫಲಕಗಳು, ವೇಗ ನಿಯಂತ್ರಣ ಸೂಚನಾ ಫಲಕಗಳು, ಎಚ್ಚರಿಕೆಯ ಫಲಕಗಳನ್ನು ಅಳವಡಿಸತಕ್ಕದ್ದು., ಉಚ್ಚಿಲ ಪೇಟೆಯಲ್ಲಿ ಹೈ ಮಾಸ್ಟ್ ದೀಪ ಅಳವಡಿಸುವುದು ಎಂದು ಸಮಿತಿ ಶಿಫಾರಸು ಮಾಡಲಾಗಿದೆ.
ಇಂದು ಸಮಿತಿಯು ಕೂಲಂಕಷವಾಗಿ ಸ್ಥಳ ಪರಿಶೀಲನೆ ನಡೆಸಿದ್ದು, ನಿರಂತರ ಅಪಘಾತಗಳಿಗೆ ಕಾರಣಗಳನ್ನು ಪತ್ತೆಹಚ್ಚಿದೆ. ಮುಂದೆ ಈ ರೀತಿ ಆಗದಂತೆ ಸುರಕ್ಷತಾ ಕ್ರಮಗಳನ್ನು ಶಿಫಾರಸು ಮಾಡಿ ಜಿಲ್ಲಾಧಿಕಾರಿಯವರಿಗೆ ಸಲ್ಲಿಸುತ್ತೇವೆ. ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರಿಗೆ ಹೆದ್ದಾರಿ ಸ್ಥಳದಲ್ಲಿಯೇ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ. ಶೀಘ್ರವಾಗಿ ಕ್ರಮ ವಹಿಸಲು ತಿಳಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಅವಘಡಗಳು ಗಣನೀಯವಾಗಿ ಕಡಿಮೆಯಾಗುವ ಭರವಸೆ ಇದೆ ಎಂದು ತಹಶಿಲ್ದಾರ್ ಪ್ರತಿಭಾ ಆರ್. ತಿಳಿಸಿದರು.
ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ ಮಾತನಾಡಿ, ಅಪಘಾತ ತಡೆಯುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು. ಪೊಲೀಸ್ ಇಲಾಖೆ ನಿರಂತರವಾಗಿ ರಸ್ತೆ ಸುರಕ್ಷತೆಗಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಇಂದಿನ ಸಭೆಯಲ್ಲಿ ಹಲವಾರು ಸುರಕ್ಷತಾ ಕ್ರಮಗಳನ್ನು ಶಿಫಾರಸು ಮಾಡಲಾಗಿದೆ. ಶೀಘ್ರವಾಗಿ ಅವುಗಳನ್ನು ಅನುಷ್ಠಾನಕ್ಕೆ ತರಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಆರ್ಟಿಒ ಎಲ್.ಬಿ. ನಾಯಕ್, ಎನ್ಹೆಚ್ನ ಪಿಡಿ ಜಾವೇದ್, ಮೆಸ್ಕಾಂನ ಎಇಇ ಅರವಿಂದ್ ಉಪಸ್ಥಿತರಿದ್ದರು