ದೇವಸ್ಥಾನದ ಕಟ್ಟಡ ಧ್ವಂಸ: 9 ಮಂದಿಯ ವಿರುದ್ಧ ಪ್ರಕರಣ ದಾಖಲು

ದೇವಸ್ಥಾನದ ಕಟ್ಟಡ ಧ್ವಂಸ: 9 ಮಂದಿಯ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ. ಶ್ರಿನಿವಾಸ ಅವರು ದೇವಸ್ಥಾನಕ್ಕೆ ಸಂಬಂಧಿಸಿದ  ಕಟ್ಟಡವನ್ನು ಧ್ವಂಸಮಾಡಿ ಪರಾರಿಯಾಗಿರುವ ಕುರಿತು ಆರೋಪಿಸಿ ರಾಜೇಶ್ ಬನ್ನೂರು ಹಾಗೂ ಇತರ 9 ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯವರು ತಾವು ನೀಡಿರುವ ದೂರಿನಲ್ಲಿ ಫೆ.5ರಂದು ಬೆಳಗ್ಗಿನ ಜಾವ 4 ಗಂಟೆಗೆ ನಾನು ಮನೆಯಲ್ಲಿರುವಾಗ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಕರೆಮಾಡಿ ದೇವಸ್ಥಾನಕ್ಕೆ ಸಂಬಂಧಿಸಿದ ಕಟ್ಟಡವನ್ನು ರಾಜೇಶ ಬನ್ನೂರು ಹಾಗೂ ಇತರ 9 ಜನ ಕಿಡಿಕೇಡಿಗಳು ಧ್ವಂಸಮಾಡಿ ಕೆಎ 19 ಎಂಎಫ್ 3276 ನಂಬರಿನ ಕಾರಿನಲ್ಲಿ ಪರಾರಿಯಾಗಿರುತ್ತಾರೆಂದು ತಿಳಿಸಿದ್ದಾರೆ. 

ವಿಷಯ ತಿಳಿದ ಕೂಡಲೇ ನಾನು ಶ್ರೀ ಮಹಾಲಿಂಗೇಶ್ಸರ ದೇವಸ್ಥಾನದ ವಠಾರಕ್ಕೆ ಬಂದು ನೋಡಿದಾಗ ಆರೋಪಿ ರಾಜೇಶ್ ಬನ್ನೂರು ಎಂಬವರು ಇತರ 9 ಜನ ಅಪರಿಚಿತ ವ್ಯಕ್ತಿಗಳೊಂದಿಗೆ ಅಕ್ರಮ ಕೂಟ ಸೇರಿಕೊಂಡು ದೇವಸ್ಥಾನದ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ದೇವಸ್ಥಾನದ ಜಾಗದಲ್ಲಿದ್ದ ಕಟ್ಟಡವನ್ನು ಧ್ವಂಸಗೊಳಿಸಿದ್ದಲ್ಲದೇ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರನ್ನು ಉದ್ದೇಶಿಸಿ ‘ನಾನು ಬಿಟ್ಟುಕೊಡುವುದಿಲ್ಲ ನಿಮಗೆ ತಾಕತ್ತಿದ್ದರೆ ನನ್ನನ್ನು ಹೊರಗೆ ಹಾಕಿ ನನ್ನ ಸಹವಾಸಕ್ಕೆ ಬಂದರೆ ಜನರನ್ನು ಸೇರಿಸಿ ಗಲಾಟೆ ಮಾಡಿಸುತ್ತೇನೆ. ಕೋರ್ಟ್ ಕೇಸ್ ಹಾಕಿ. ನೀವು ಹೇಗೆ ದೇವಸ್ಥಾನದ ವಶಕ್ಕೆ ಮಾಡುತ್ತೀರಾ ಎಂದು ನಾನು ನೋಡುತ್ತೇನೆ ಎಂದು ದಮ್ಕಿ ಹಾಕಿ ಅಲ್ಲಿಂದ ಪರಾರಿಯಾಗಿರುತ್ತಾರೆ ಎಂಬುದಾಗಿ ತಾವು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ. ಶ್ರಿನಿವಾಸ ಅವರು ನೀಡಿದ ದೂರಿನ ಮೇರೆಗೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article