
‘ಕಡಲಾಚೆಯ ರಮ್ಯ ನೋಟ ದುಬಾಯಿ" ಪುಸ್ತಕ ಬಿಡುಗಡೆ
ಮಂಗಳೂರು: ಅಮೃತ ಪ್ರಕಾಶ ಪತ್ರಿಕೆ ವತಿಯಿಂದ ನಡೆಯುವ 42ನೇ ಯ ಸರಣಿ ಕೃತಿ ಕೊಡಗಿನ ಚಿತ್ರ ಶಿಲ್ಪ ಕಲಾವಿದ ಮತ್ತು ಲೇಖಕ ಬಿ.ಕೆ. ಗಣೇಶ್ ದುಬಾಯಿಯ ಬಗ್ಗೆ ಪ್ರಕಟಿತ ಲೇಖನಗಳ ಸಂಕಲನ "ಕಡಲಾಚೆಯ ರಮ್ಯ ನೋಟ ದುಬಾಯಿ" ಕೃತಿ ಮಂಗಳೂರು ಪತ್ರಿಕಾ ಭವನದಲ್ಲಿ ಇಂದು ಬಿಡುಗಡೆಗೊಂಡಿತು.
ಕೃತಿ ಬಿಡುಗಡೆಗೊಳಿಸಿದ ಯು.ಎ.ಇ. ಬಂಟ್ಸ್ ಅಧ್ಯಕ್ಷ ವಕ್ವಾಡಿ ಪ್ರವೀಣ್ ಶೆಟ್ಟಿ, ದುಬಾಯಿಯಲ್ಲಿ ಕನ್ನಡ ಪುಸ್ತಕವನ್ನು ತನ್ನದೇ ಆದ ಶೈಲಿಯಲ್ಲಿ ರಚಿಸಿ ದುಬಾಯಿಯಲ್ಲಿರುವ ವಾಸ್ತು ಶಿಲ್ಪಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಾಗೂ ಅತ್ಯಂತ ಸುಂದರವಾದ ವರ್ಣ ಚಿತ್ರದೊಂದಿಗೆ ಓದುಗರಿಗೆ ಮುಟ್ಟಿಸುವಲ್ಲಿ ಕೃತಿ ಯಶಸ್ವಿಯಾಗಿದೆ. ಎಂದು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಮುನ್ನುಡಿ ಬರೆದಿರುವ ಡಾ. ಅರುಣಾ ನಾಗರಾಜ್ ರವರು ಕೃತಿಯಲ್ಲಿರುವ ಒಂದೊಂದು ಲೇಖನಗಳು ಸಂಪೂರ್ಣ ಮಾಹಿತಿಯೊಂದಿಗೆ ಓದುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕೈಯಲ್ಲಿ ಈ ಒಂದು ಕೃತಿ ಇದ್ದರೆ ಸಮಗ್ರ ದುಬಾಯಿಯನ್ನು ಸಂಪೂರ್ಣವಾಗಿ ಪ್ರವಾಸ ಮಾಡಿಕೊಂಡು ಬಂದಿರುವ ಅನುಭವಾಗುತ್ತದೆ ಎಂದು ತಮ್ಮ ಮೆಚ್ಚುಗೆಯನ್ನು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸರ್ವೋತ್ತಮ ಶೆಟ್ಟಿ, ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಗಣೇಶ್ ರೈಯವರು ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಯು.ಎ.ಇ. ಯಲ್ಲಿರುವ ಕರ್ನಾಟಕ ಪರ ಸಂಘಟನೆಗಳಲ್ಲಿ ಕರ್ನಾಟಕದ ಕಲೆ ಭಾಷೆ ಸಂಸ್ಕೃತಿಯನ್ನು ಕಳೆದ ಎರಡುವರೆ ದಶಕಗಳಿಂದ ನಿರಂತರವಾಗಿ ಮಾಡಿಕೋಡು ಬರುತ್ತಿದ್ದು, ಶಿಲ್ಪಿಯಾಗಿ, ಚಿತ್ರಕಾರರಾಗಿ, ಕಾರ್ಯಕ್ರಮ ನಿರೂಪಕರಾಗಿ ಸಮಾಜ ಸೇವಕರಾಗಿ, ಬಹುಮುಖ ಪ್ರತಿಭೆಯ ವ್ಯಕ್ತಿತ್ವವನ್ನು ಹೊಂದಿರುವ ಗಣೇಶ್ ರೈಯವರು ಲೇಖಕ ಬರಹಗಾರರಗಿ ನೂರಾರು ಗಣ್ಯರ ಸಂದರ್ಶನ ಲೇಖನಗಳನ್ನು ಪ್ರಕಟಿಸುತ್ತಾ ಇದೀಗ ದುಬಾಯಿಯ ಸಂಪೂರ್ಣ ಚಿತ್ರಣವಿರುವ ಕಡಲಾಚೆಯ ರಮ್ಯ ನೋಟ ದುಬಾಯಿ ಕೃತಿಯನ್ನು ಪ್ರಕಟಿಸಿರುವುದು ದುಬಾಯಿಯಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಿಗೆ ಸಂದಿರುವ ಗೌರವ ಎಂದರು.
ಲೇಖಕ ಬಿ.ಕೆ. ಗಣೇಶ್, ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು.
ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿದರು. ಸುರೇಖಾ ಕಾರ್ಯಕ್ರಮ ನಿರ್ವಹಿಸಿದರು.