
ಕೃಷಿ ಗದ್ದೆಯಲ್ಲಿ ಸುಡುಮಣ್ಣಿನ ಬೆಂಕಿಗೆ ಆಹುತಿಯಾದ ಕೃಷಿಕ
ಕುಂದಾಪುರ: ಕೃಷಿ ಗದ್ದೆಯಲ್ಲಿ ಸುಡುಮಣ್ಣು ಹಾಕುವಾಗ ಬೆಂಕಿ ನಂದಿಸಲು ಹೋದ ಕೃಷಿಕರೊಬ್ಬರು ಸಜೀವ ದಹನವಾದ ದುರ್ಘಟನೆ ಕೋಟೇಶ್ವರ ಸಮೀಪದ ಕಾಳಾವರದ ಬಡಾಗುಡ್ಡೆ ಸಾಂತಾವರ ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಮೃತರನ್ನು ಕಾಳಾವರ ನಿವಾಸಿ ಮಹಾಲಿಂಗ ದೇವಾಡಿಗ (83) ಎಂದು ಗುರುತಿಸಲಾಗಿದೆ.
ಇವರು ಮಳೆಗಾಲದ ಕೃಷಿಗಾಗಿ ತಮ್ಮ ಗದ್ದೆಯಲ್ಲಿ ಮಗಳೊಂದಿಗೆ ಸುಡುಮಣ್ಣು ತಯಾರಿಯಲ್ಲಿದ್ದರು. ಕಸ, ಕಳೆ ಗಿಡಳನ್ನೆಲ್ಲ ಒಟ್ಟು ಸೇರಿಸಿ ಬೆಂಕಿ ಹಾಕಿದ್ದರು. ಈ ವೇಳೆ ಬೆಂಕಿಯ ಕೆನ್ನಾಲಗೆ ಸುತ್ತಲೂ ಪಸರಿಸಿದ್ದು, ಸಮೀಪದ ನಾಗಬನಕ್ಕೂ ಬೆಂಕಿ ಹಬ್ಬಿದೆ. ಎಲ್ಲಾ ಕಡೆಗೂ ಹೊಗೆ ಆವರಿಸಿದೆ. ಕೂಡಲೇ ಎಚ್ಚೆತ್ತ ಮಗಳು ಬೇಬಿ ಅಲ್ಲಿಗೆ ತೆರಳಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿರುವಾಗಲೇ ತಂದೆ ಮಹಾಲಿಂಗ ದೇವಾಡಿಗ ಬೆಂಕಿಯ ಮಧ್ಯೆ ಸಿಲುಕಿದ್ದರು.
ಕೂಡಲೇ ಅಗ್ನಿಶಾಮಕದಳದವರಿಗೆ ಮಾಹಿತಿ ನೀಡಲಾಯಿತು. ಆದರೆ ಅಗ್ನಿಶಾಮಕದಳದ ವಾಹನ ಬರುವಷ್ಟರಲ್ಲಿ ರೈತ ಮಹಾಲಿಂಗ ಅವರು ಸಜೀವ ದಹನವಾಗಿದ್ದಾರೆ.
ದುರಂತ ಸ್ಥಳಕ್ಕೆ ಕುಂದಾಪುರ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಭೀಮಾಶಂಕರ್ ಹಾಗೂ ಸಿಬ್ಬಂದಿಗಳು, ಅಗ್ನಿಶಾಮಕದಳದವರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.