
ಗಣಿತ ಪದವಿ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶ: ಡಾ. ಕಿಶೋರಿ ಪಿ. ನಾರಾಯಣ್ಕರ್
Monday, April 7, 2025
ಮಂಗಳೂರು: ಗಣಿತ ಪದವಿಯನ್ನು ಪಡೆದ ವಿದ್ಯಾರ್ಥಿಗಳಿಗೆ ತಮ್ಮ ವೃತ್ತಿ ಜೀವನದಲ್ಲಿ ವಿಫುಲ ಅವಕಾಶಗಳಿವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಕಿಶೋರಿ ಪಿ ನಾರಾಯಣ್ಕರ್ ಹೇಳಿದರು.
ಅವರು ಇಂದು ನಗರದ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗಣಿತಶಾಸ್ತ್ರ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶದ ಜಂಟಿ ಆಶ್ರಯದಲ್ಲಿ ನಡೆದ ‘ಗಣಿತ ವಿದ್ಯಾರ್ಥಿಗಳಿಗೆ ವಿಜ್ಞಾನ ಪದವಿಯ ನಂತರ ಇರುವ ವೃತ್ತಿ ಅವಕಾಶಗಳು ಮತ್ತು ವ್ಯಾಪ್ತಿ’ ಎಂಬ ವಿಚಾರ ಗೋಷ್ಠಿಯಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಅವರು ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅಡಿಯಲ್ಲಿ ಬರುವ ವಿದ್ಯಾರ್ಥಿಗಳಿಗೆ ಮಿನಿ ಪ್ರಾಜೆಕ್ಟ್ ವರ್ಕ್ನ ಉದ್ದೇಶ ಮತ್ತು ರೂಪುರೇಷೆಗಳ ಬಗ್ಗೆ, ನೆಟ್, ಕೆಸೆಟ್, ಯುಪಿಎಸ್ಸಿ/ಕೆಪಿಎಸ್ಸಿ, ಬ್ಯಾಂಕಿಂಗ್ ಉದ್ಯೋಗದಲ್ಲಿ ಸಿಗುವ ಅವಕಾಶಗಳ ಬಗೆ ವಿಸ್ತಾರವಾದ ಮಾಹಿತಿಯನ್ನು ನೀಡಿದರು.
ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮೋಹನ್ ದಾಸ್ ಹಾಗೂ ಉಪನ್ಯಾಸಕಿ ಭವ್ಯ ಕೆ. ಉಪಸ್ಥಿತರಿದ್ದರು. ಅಂತಿಮ ಬಿಎಸ್ಸಿ ವಿದ್ಯಾರ್ಥಿನಿ ಗೀತಾ ಸ್ವಾಗತಿಸಿ, ವಿದ್ಯಾರ್ಥಿ ಸನತ್ ಕುಮಾರ್ ಆಚಾರ್ಯ ವಂದಿಸಿದರು.