
ಅತಿವೃಷ್ಟಿ: ಜಿಲ್ಲೆಗೆ ಎನ್ಡಿಆರ್ಎಫ್, ಎಸ್ಡಿಆರ್ಎಫ್ ತಂಡ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವುದರಿಂದ ವಿಪತ್ತು ನಿರ್ವಹಣೆಗೆ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ದಳಗಳು ಜಿಲ್ಲೆಗೆ ಆಗಮಿಸಲಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ.ಕೆ. ಆನಂದ್ ತಿಳಿಸಿದ್ದಾರೆ.
ಅವರು ಭಾನುವಾರ ಜಿಲ್ಲೆಯ ಮಳೆ ಪರಿಸ್ಥಿತಿ ಬಗ್ಗೆ ಅಧಿಕಾರಿಗಳೊಂದಿಗೆ ಆನ್ಲೈನ್ ಸಭೆ ನಡೆಸಿ ಮಾತನಾಡಿದರು.
ರಾಷ್ಟ್ರೀಯ ವಿಪತ್ತು ದಳ(ಎನ್.ಡಿ.ಆರ್.ಎಫ್.)ದ ಒಂದು ತಂಡವು ಆಗಮಿಸಲಿದ್ದು, ಇದನ್ನು ಪುತ್ತೂರಿನಲ್ಲಿ ಇಡಲಾಗುವುದು. ರಾಜ್ಯ ವಿಪತ್ತು ದಳ(ಎಸ್.ಡಿ.ಆರ್.ಎಫ್) ಎರಡು ತಂಡವು ಆಗಮಿಸಲಿದ್ದು, ಮಂಗಳೂರು ಹಾಗೂ ಸುಬ್ರಹ್ಮಣ್ಯ ದಲ್ಲಿ ಇಡಲಾಗುವುದು. ಈ ದಳಗಳು ಎಲ್ಲ ರೀತಿಯ ಸಲಕರಣೆ, ಅಗತ್ಯ ಯಂತ್ರೋಪಕರಣಗಳೊಂದಿಗೆ ಬರಲಿದ್ದು, ಪ್ರಾಕೃತಿಕ ವಿಪತ್ತುಗಳ ಸಂದರ್ಭದಲ್ಲಿ ಕಾರ್ಯಾಚರಿಸಲಿದೆ. ಎಸ್.ಡಿ.ಆರ್.ಎಫ್. ತಂಡ ಈಗಾಗಲೆ ಆಗಮಿಸಿದೆ ಎಂದು ಅವರು ಹೇಳಿದರು.
ವಿಪತ್ತು ನಿರ್ವಹಣೆಗೆ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಮತ್ತು ಗ್ರಾ.ಪಂ. ಪಿಡಿಓಗಳು ತಮ್ಮ ವ್ಯಾಪ್ತಿಯಲ್ಲಿ ಕಟ್ಟೆಚ್ಚರದಿಂದ ಇರಬೇಕು. ಯಾವುದೇ ಪ್ರಾಕೃತಿಕ ದುರಂತಗಳು ಸಂಭವಿಸಿದರೆ ತಕ್ಷಣವೇ ಸ್ಪಂದಿಸಬೇಕು. ಜೀವ ಹಾನಿ ತಪ್ಪಿಸಲು ಆದ್ಯತೆ ನೀಡಬೇಕು. ತಾಲೂಕು ಆಡಳಿತದೊಂದಿಗೆ ಸಮನ್ವಯದಿಂದ ಕಾರ್ಯಾಚರಿಸಿ, ದುರಂತದ ತೀವ್ರತೆ ತಗ್ಗಿಸಬೇಕು. ಮೆಸ್ಕಾಂ, ಅರಣ್ಯ ಸೇರಿದಂತೆ ಸಂಬಂಧಿಸಿದ ಯಾವುದೇ ಇಲಾಖೆಗಳು ತ್ವರಿತವಾಗಿ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹವಾಮಾನ ಇಲಾಖೆಯು 5 ದಿನ ರೆಡ್ ಅಲಟ್೯ ಘೋಷಿಸಿದೆ. ಈ ಹಿಂದೆ ದುರ್ಘಟನೆ ಆಗಿರುವ ಸ್ಥಳಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಜೆಸಿಬಿ, ಬೋಟುಗಳನ್ನು ಸಿದ್ಧವಾಗಿಡಬೇಕು. ಶಾಲೆಗಳು ಶುರು ಆಗುವ ಮೊದಲು ಶಿಥಿಲಗೊಂಡಿರುವ ಅಂಗನವಾಡಿ ಮತ್ತು ಶಾಲಾ ಕೊಠಡಿಗಳನ್ನು ತೆರವುಗೊಳಿಸಲು ಡಾ. ಕೆ. ಆನಂದ್ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗಳಿಂದ ಕೆಲವು ಜನವಸತಿ ಪ್ರದೇಶಗಳಲ್ಲಿ ತೀವ್ರ ತೊಂದರೆಯಾಗಿರುವ ಬಗ್ಗೆ ದೂರು ಬಂದಿದ್ದು, ಈ ಬಗ್ಗೆ ಕೂಡಲೇ ಸ್ಪಂದಿಸಿ ಕ್ರಮ ಕೈಗೊಳ್ಳಲು ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಸೂಚಿಸಿದರು.
ಮಳೆಗಾಲ ಶುರು ಆಗುವ ಮೊದಲೇ ಮೀನುಗಾರಿಕೆ ತೆರಳಿದ್ದ ಬೋಟುಗಳು ಹವಾಮಾನ ವೈಪರೀತ್ಯಗಳಿಂದ ಹಿಂದಿರುಗಿ ಬರುತ್ತಿದ್ದು, ಈ ಬೋಟುಗಳಿಗೆ ಎನ್.ಎಂ.ಪಿ.ಎ. ಬಂದರಿಗೆ ಪ್ರವೇಶಿಸಲು ಅನುಮತಿ ನೀಡಲು ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು, ತಹಶೀಲ್ದಾರರು ಉಪಸ್ಥಿತರಿದ್ದರು.