
ತಿರುಪತಿಯಲ್ಲಿ ಅಪಘಾತ-ಬಿಳಿನೆಲೆ ಕೈಕಂಬದ ಮಹಿಳೆ ಮೃತ್ಯು: 15 ಮಂದಿಗೆ ಗಾಯ
ಸುಬ್ರಹ್ಮಣ್ಯ: ತಿರುಪತಿ ಯಾತ್ರೆಗೆ ತೆರಳಿದ್ದ ಕಡಬ ತಾಲೂಕಿನ ಬಿಳಿನೆಲೆ ಕೈಕಂಬದ ಯಾತ್ರಿಕರು ಸೇರಿದಂತೆ ಕರ್ನಾಟಕದ ಯಾತ್ರಿಕರಿದ್ದ ವಾಹನ ಅಪಘಾತಕ್ಕೀಡಾಗಿ ಬಿಳಿನೆಲೆ ಕೈಕಂಬದ ಮಹಿಳೆ ಮೃತಪಟ್ಟು 15ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಬುಧವಾರ ಬೆಳಗ್ಗೆ ತಿರುಪತಿ-ಶ್ರೀಕಾಳಹಸ್ತಿ ಹೆದ್ದಾರಿಯಲ್ಲಿ ಸಂಭವಿಸಿದೆ.
ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಕೈಕಂಬದ ಕುಟುಂಬಸ್ಥರು, ಹಾಗೂ ಅವರ ಸಂಬಂಧಿಕರು ಪ್ಯಾಕೇಜ್ ಬಸ್ ನಲ್ಲಿ ತಿರುಪತಿಗೆ ಯಾತ್ರೆ ಕೈಗೊಂಡಿದ್ದರು. ಮಂಗಳವಾರ ಗುಂಡ್ಯದಿಂದ ಪ್ಯಾಕೇಜ್ ಬಸ್ ಮೂಲಕ ತಿರುಪತಿಗೆ ತೆರಳಿದ್ದರು. ಬುಧವಾರ ಸಂಜೆ ತಿರುಪತಿಯಲ್ಲಿ ದರ್ಶನ ನೆರವೇರಿಸುವವರಿದ್ದು, ಅದಕ್ಕೂ ಮೊದಲು ಬೆಳಗ್ಗೆ ತಿರುಪತಿಯಿಂದ ಶ್ರೀಕಾಳಹಸ್ತಿಗೆ ಮೂರು ಟಿಟಿಯಲ್ಲಿ ಕರ್ನಾಟಕದ ತಂಡ ಹೊರಟಿದ್ದು, ಈ ವೇಳೆ ಬಿಳಿನೆಲೆ ಕೈಕಂಬದ ತಂಡ ಇದ್ದ ಟಿಟಿ ವಾಹನ ಮೇಲ್ಸೇತುವೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಬಡಿದು ಮೂರು ಪಲ್ಟಿಯಾಗಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಕೂಸಪ್ಪ ಅವರ ಪತ್ನಿ ಶೇಷಮ್ಮ (70) ಎಂಬವರು ಮೃತರಾಗಿದ್ದು. ಘಟನೆಯಲ್ಲಿ ಇಬ್ಬರು ಗಂಭೀರ ಗಾಯಗೊಂಡು 10ಕ್ಕೂ ಅಧಿಕೃತ ಮಂದಿ ಗಾಯಗೊಂಡಿದ್ದು, ಅಲ್ಲಿನ ವಿವಿಧ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೈಕಂಬದ ತಿಲೇಶ್ (45), ಕಮಲಾಕ್ಷಿ (60) ಎಂಬವರು ತೀವ್ರ ಗಾಯಗೊಂಡಿದ್ದಾರೆ. ಉಳಿದಂತೆ ನಿವೃತ್ತ ಯೋಧ ಸೋಮಶೇಖರ್, ಶೀನಪ್ಪ, ಕೂಸಪ್ಪ, ನಿಖಿಲ್, ತನುಷ್ ಸೇರಿದಂತೆ ಕರ್ನಾಟಕದ ಸುಮಾರು 15 ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.