
ಪಜಿರಡ್ಕ ಕಿಂಡಿ ಅಣೆಕಟ್ಟಿನ ಹಲಗೆ ತೆರವು
ಉಜಿರೆ: ಇತ್ತೀಚೆಗೆ ಸುರಿದ ಭಾರಿ ಮಳೆಗೆ ನದಿ ತುಂಬಿ ಹರಿದಾಗ ಅಪಾಯದ ಸನ್ನಿವೇಶ ಸೃಷ್ಟಿಸಿದ್ದ ಪಜಿರಡ್ಕ ಕಿಂಡಿ ಅಣೆಕಟ್ಟಿನ ಹಲಗೆಗಳನ್ನು ತೆರವುಗೊಳಿಸಿ ನೀರಿನ ಸರಾಗ ಹರಿವಿಗೆ ಅನುವು ಮಾಡಿಕೊಡಲಾಗಿದೆ.
ಮೇ ಕೊನೆಯ ವಾರದಲ್ಲಿ ತಾಲೂಕಿನಲ್ಲಿ ಸುರಿದ ಭಾರಿ ಮಳೆಯಿಂದ ಇಲ್ಲಿ ನದಿ ತುಂಬಿ ಹರಿದಿತ್ತು. ಕಿಂಡಿ ಅಣೆಕಟ್ಟಿಗೆ ಹಾಕಿದ ಹಲಗೆ ತೆರವುಗೊಳ್ಳದ ಕಾರಣ ನದಿಯ ಎತ್ತರ ಪ್ರದೇಶಗಳಾದ ಕುಡೆಂಚಿ, ಕಾಯರ್ತೋಡಿ, ಹುಣಿಪಾಜೆ, ಆನಂಗಳ್ಳಿ ಮೊದಲಾದ ಭಾಗಗಳ ತೋಟಗಳು ನೆರೆಯಿಂದಾವೃತವಾಗಿ ನದಿ ನೀರು ಸರಾಗವಾಗಿ ಹರಿಯದೆ, ಪ್ರವಾಹ ಸ್ಥಿತಿ ನಿರ್ಮಾಣಗೊಂಡಿತ್ತು. ಇದರಿಂದ ನದಿ ತೀರದಲ್ಲಿ ವಾಸ್ತವ್ಯ ಇರುವ ಮಂದಿಯೂ ಭಯಪಡುವಂತಾಗಿತ್ತು. ಹಲಗೆ ತೆರವುಗೊಳ್ಳದಿದ್ದುದರಿಂದ ಕಿಂಡಿ ಅಣೆಕಟ್ಟಿನಲ್ಲಿ ತ್ಯಾಜ್ಯ, ಮರಮಟ್ಟು ದಾಸ್ತಾನುಗೊಂಡು ತೋಟಗಳಿಗೆ ನುಗ್ಗಿದ ನೀರು ಅಡಕೆ ಗಿಡಗಳ ಹೊಂಡದಲ್ಲಿ ಸಂಗ್ರಹಗೊಂಡು ಕೆಲವೆಡೆ ಅಡಕೆ ಗಿಡಗಳು ನಾಶವಾದ ಘಟನೆಯೂ ನಡೆದಿದೆ.
ನಾಲ್ಕು ವರ್ಷಗಳ ಹಿಂದೆ ಕಲ್ಮಂಜ ಗ್ರಾಮದ ಪಜಿರಡ್ಕ ಎಂಬಲ್ಲಿ ಮೃತ್ಯುಂಜಯ-ನೇತ್ರಾವತಿ ನದಿಗಳ ಸಂಗಮ ಸ್ಥಳದ ಸಮೀಪ ಪಜಿರಡ್ಕ ಕಿಂಡಿ ಅಣೆಕಟ್ಟು ಸಹಿತ ಸೇತುವೆ ನಿರ್ಮಾಣಗೊಂಡಿದೆ. ಈ ಕಿಂಡಿ ಅಣೆಕಟ್ಟಿಗೆ ಬೇಸಿಗೆಯಲ್ಲಿ ಹಲಗೆ ಇಳಿಸಿ ನೀರು ಸಂಗ್ರಹಿಸಲಾಗುತ್ತದೆ. ಇದು ಇಲ್ಲಿರುವ ದೇವರ ಮೀನುಗಳಿಗೆ ಹಾಗೂ ಸುತ್ತಲ ಪರಿಸರದ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಿದೆ. ಕಿಂಡಿ ಅಣೆಕಟ್ಟಿನ ಸೇತುವೆ ಕಲ್ಮಂಜ ಗ್ರಾಮದ ಪರಾರಿ, ಆನಂಗಳ್ಳಿ, ಮುಂಡಾಜೆ, ಸೋಮಂತಡ್ಕ, ಕನ್ಯಾಡಿ, ಸ್ನಾನಘಟ್ಟ, ಧರ್ಮಸ್ಥಳ ಮೊದಲಾದ ಕಡೆಗಳಿಗೆ ಹತ್ತಿರದ ಸಂಪರ್ಕವಾಗಿದೆ.
ಹಲಗೆ ತೆರವು:
ಈ ಬಾರಿ ಬೇಗನೆ ಸುರಿದ ಬೇಸಿಗೆ ಮಳೆ ಹಾಗೂ ಮೇ ತಿಂಗಳಲ್ಲಿ ಸುರಿದ ವಿಪರೀತ ಮಳೆಯಿಂದ ಕಿಂಡಿ ಅಣೆಕಟ್ಟುಗಳ ಹಲಗೆ ತೆರವು ಗೊಳಿಸಲು ಅವಕಾಶ ಸಿಗದ ಕಾರಣ ಅಲ್ಲಲ್ಲಿ ಇಂತಹ ಕೃತಕ ನೆರೆ ಅವಾಂತರಗಳು ಸೃಷ್ಟಿಯಾಗಿತ್ತು. ಕಳೆದ ಒಂದು ವಾರದಿಂದ ಮಳೆಯ ಪ್ರಮಾಣ ಕೊಂಚ ಇಳಿಕೆಯಾಗಿದ್ದು ನದಿ, ಹೊಳೆಗಳು ಯಥಾಸ್ಥಿತಿಯನ್ನು ತಲುಪಿದೆ. ತಾಲೂಕಿನ ಹೆಚ್ಚಿನ ಎಲ್ಲಾ ಕಿಂಡಿ ಅಣೆಕಟ್ಟುಗಳ ಹಲಗೆ ತೆರವುಗೊಳಿಸಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ರಾಕೇಶ್ ತಿಳಿಸಿದ್ದಾರೆ.
ಕೆಲವೊಂದು ಕಿಂಡಿ ಅಣೆಕಟ್ಟುಗಳಲ್ಲಿ ತುಂಬಿದ ತ್ಯಾಜ್ಯವು ತೆರವುಗೊಂಡಿದೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ನದಿಗಳು ತುಂಬಿ ಹರಿದಾಗ ತ್ಯಾಜ್ಯ, ಮರಮಟ್ಟು ಸಂಗ್ರಹಗೊಳ್ಳುವ ಸಾಧ್ಯತೆ ಇದ್ದು ಇದರ ಬಗ್ಗೆ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ.