
ಸಿಂಧೂರ ವಿಜಯ ಉದ್ಯಾನವನ ಉದ್ಘಾಟನೆ
ಮಂಗಳೂರು: ಕೊಟ್ಟಾರ ಚೌಕಿ ಹೆದ್ದಾರಿ 66ರ ಬಳಿ ಮಂಗಳೂರು ಮಹಾನಗರ ಪಾಲಿಕೆಯ 16ನೇ ಬಂಗ್ರಕೂಳೂರು ವಾರ್ಡ್ನಲ್ಲಿ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಾಣಗೊಂಡಿರುವ ನೂತನ ಸಿಂಧೂರ ವಿಜಯ ಉದ್ಯಾನವನದ ಉದ್ಘಾಟನೆ ಶನಿವಾರ ನಡೆಯಿತು.
ಶಾಸಕ ಡಾ. ಭರತ್ ಶೆಟ್ಟಿ ವೈ. ಅಧ್ಯಕ್ಷತೆಯಲ್ಲಿ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು 42.35 ಲಕ್ಷ ರೂ. ವೆಚ್ಚದಲ್ಲಿ ಸೈನಿಕರನ್ನು ಸ್ಮರಿಸುವ ಪಾರ್ಕ್ ನಿರ್ಮಾಣಗೊಂಡಿದೆ. ಶಾಸಕರಾದ ಡಾ. ಭರತ್ ಶೆಟ್ಟಿ ವೈ. ಅವರು ತಮ್ಮ ಕ್ಷೇತ್ರದಾದ್ಯಂತ ಅತ್ಯುತ್ತಮವಾದ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಾ ಬರುತ್ತಿದ್ದು, ಈ ಯೋಜನೆಯನ್ನು ಕೂಡ ಕಾರ್ಯಗತಗೊಳಿಸುವಲ್ಲಿ ಶ್ರಮಿಸಿದ್ದಾರೆ. ಮೂಡಾದ ಸದಸ್ಯರು ಅಧಿಕಾರಿಗಳು ಪಾಲಿಕೆಯ ಸದಸ್ಯರು ಅಧಿಕಾರಿಗಳ ಸಮನ್ವಯದೊಂದಿಗೆ ಉತ್ತಮವಾಗಿ ನಿರ್ಮಾಣಗೊಂಡಿದೆ ಎಂದು ಶ್ಲಾಘಿಸಿದರು.
ಶಾಸಕ ಡಾ. ಭರತ್ ಶೆಟ್ಟಿ ವೈ. ಮಾತನಾಡಿ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೊಟ್ಟಾರ ಚೌಕಿಯಲ್ಲಿ ಮೊದಲ ಅವಧಿಯಲ್ಲಿ ಗುದ್ದಲಿ ಪೂಜೆಯನ್ನು ನೆರವೇರಿಸಿದ್ದೆವು. ಸ್ಥಳೀಯ ಕಾರ್ಪೊರೇಟರ್, ಸಾರ್ವಜನಿಕರು ಇಲ್ಲಿನ ಜಂಕ್ಷನ್ನಲ್ಲಿ ಸೈನಿಕರ ಸ್ಮಾರಕವನ್ನು ನಿರ್ಮಿಸುವ ಬಗ್ಗೆ ಬೇಡಿಕೆಯನ್ನು ಇಟ್ಟಿದ್ದರು. ಸೈನಿಕರ ತ್ಯಾಗ ಬಲಿದಾನವನ್ನು ಸದಾ ಸ್ಮರಿಸಿಕೊಳ್ಳುವ ನಿಟ್ಟಿನಲ್ಲಿ, ಅವರು ದೇಶದ ರಕ್ಷಣೆಗಾಗಿ ತಮ್ಮ ಕುಟುಂಬವನ್ನು ತೊರೆದು ಗಾಡಿ ಭಾಗದಲ್ಲಿ ಇದ್ದುಕೊಂಡು ದೇಶದ ಜನತೆ ಸುರಕ್ಷತೆಯಿಂದ ಜೀವನ ನಡೆಸಲು ತ್ಯಾಗವನ್ನೇ ಮಾಡುತ್ತಿದ್ದಾರೆ. ಹೀಗಾಗಿ ಈ ಉದ್ಯಾನವನ ನಿರ್ಮಾಣದಲ್ಲಿ ನಮಗೂ ಸಂತೃಪ್ತಿಯನ್ನು ಉಂಟುಮಾಡಿದೆ ಎಂದು ಹೇಳಿದರು.
ನಗರ ಪ್ರವೇಶಿಸುವ ಜಂಕ್ಷನ್ನಲ್ಲಿ ಈ ಉದ್ಯಾನವನ ನಿರ್ಮಾಣಗೊಂಡಿರುವುದರಿಂದ ಹೆಚ್ಚು ಆಕರ್ಷಣೀಯವಾಗಿದೆ. ಈ ಒಂದು ಪಾರ್ಕ್ನ್ನು ಸೈನಿಕರಿಗೆ ಹಾಗೂ ಅವರ ಕುಟುಂಬಗಳಿಗೆ ಅರ್ಪಿಸುವುದರ ಜೊತೆಗೆ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಸದಸ್ಯರು ಅಧಿಕಾರಿಗಳಿಗೆ ಈ ಸಂದರ್ಭ ಶ್ಲಾಘನೆಯನ್ನು ವ್ಯಕ್ತಪಡಿಸುತ್ತೇನೆ ಎಂದರು.
ಭಾರತವು ಪಾಕಿಸ್ತಾನದ ಉಗ್ರರ ಮೇಲಿನ ಕಾರ್ಯಾಚರಣೆಯ ಸಂದರ್ಭ ಜಯವನ್ನು ಪಡೆದಿರುವುದರ ಸೈನಿಕರ ಶೌರ್ಯದ ಕುರಿತಾಗಿ ಸಿಂಧೂರ ಕಾರ್ಯಾಚರಣೆ ಸದಾ ನೆನಪಿನಲ್ಲಿ ಉಳಿಯುವಂತಾಗಲು ಸಿಂಧೂರ ವಿಜಯ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದು ತಿಳಿಸಿದರು.