
ಧರ್ಮಸ್ಥಳದಲ್ಲಿ 54ನೇ ವರ್ಷದ ಪುರಾಣ ವಾಚನ-ಪ್ರವಚನ
ಉಜಿರೆ: ಧರ್ಮಸ್ಥಳದಲ್ಲಿ 54ನೇ ವರ್ಷದ ಪುರಾಣ-ಪ್ರವಚನ ಕಾರ್ಯಕ್ರಮವು ಜು.16 ರಿಂದ ಸೆಪ್ಟೆಂಬರ್ 16ರ ವರೆಗೆ ಪ್ರತಿದಿನ ಸಂಜೆ ಗಂಟೆ 6.30ರಿಂದ 8 ಗಂಟೆ ವರೆಗೆ ದೇವಸ್ಥಾನದ ಎದುರು ಇರುವ ಪ್ರವಚನಮಂಟಪದಲ್ಲಿ ನಡೆಯಲಿದೆ.
ಖ್ಯಾತ ವಿದ್ವಾಂಸರು ಹಾಗೂ ಕಲಾವಿದರಿಂದ ಕುಮಾರವ್ಯಾಸ ವಿರಚಿತ ‘ಕರ್ಣಾಟ ಭಾರತ ಕಥಾಮಂಜರಿ’ಯ ವಾಚನ-ಪ್ರವಚನ ನಡೆಯುತ್ತದೆ.
ಶನಿವಾರ ಮತ್ತು ಭಾನುವಾರಗಳಲ್ಲಿ ಕವಿ ರತ್ನಾಕರವರ್ಣಿಯ ಭರತೇಶವೈಭವ, ಮಂಕುತಿಮ್ಮನ ಕಗ್ಗ, ಶ್ರೀಮದ್ಭಾಗವತ, ಯಶೋಧರಚರಿತೆ, ತೊರವೆರಾಮಾಯಣ, ಮಹಾಭಾರತ, ಸೋಮೇಶ್ವರಶತಕ ಮೊದಲಾದ ವಿವಿಧ ಕಾವ್ಯಗಳ ಆಯ್ದ ಭಾಗಗಳನ್ನು ವಾಚನ-ಪ್ರವಚನಕ್ಕೆ ಬಳಸಲಾಗುವುದು.
ಜು.16 ರಂದು ಮತ್ತು 17 ರಂದು ಗಣಪತಿ ಭಟ್ ಪದ್ಯಾಣ ವಾಚನಕಾರರಾಗಿಯೂ, ಉಜಿರೆ ಅಶೋಕ ಭಟ್ ಪ್ರವಚನಕಾರರಾಗಿಯೂ ಭಾಗವಹಿಸುವರು.
ಉದ್ಘಾಟನಾ ಸಮಾರಂಭ: ಜು.16 ರಂದು ಸಂಜೆ 5 ಗಂಟೆಗೆ ಯಕ್ಷಗಾನ ಬಯಲಾಟ ಅಕಾಡೆಮಿಯ ‘ಯಕ್ಷಸಿರಿ’ ಪ್ರಶಸ್ತಿ ಪುರಸ್ಕೃತರಾದ ಹಾಗೂ ನಿವೃತ್ತ ಉಪನ್ಯಾಸಕ ಡಾ. ಶಾಂತರಾಮ ಪ್ರಭು ನಿಟ್ಟೂರು ಅವರು ಪುರಾಣ ವಾಚನ-ಪ್ರವಚನ ಕಾರ್ಯಕ್ರಮ ಉದ್ಘಾಟಿಸುವರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು ಎಂದು ಸಮಿತಿಯ ಸಂಚಾಲಕರಾದ ಎ.ವಿ. ಶೆಟ್ಟಿ ತಿಳಿಸಿದ್ದಾರೆ.