
ಕಲ್ಲಿನಕೋರೆಯ ಗುಂಡಿಯಲ್ಲಿ ಆಯತಪ್ಪಿ ಬಿದ್ದು ಯುವಕನ ಮೃತ್ಯು
ಮೃತ ಯುವಕನನ್ನು ಉಳ್ಳಾಲ ತಾಲೂಕಿನ ಇರಾ ಸಮೀಪದ ಸೂತ್ರಬೈಲು ನಿವಾಸಿ ಉಮ್ಮರ್ ಎಂಬವರ ಪುತ್ರ ಅಬ್ದುಲ್ ಅಮೀರ್ (23) ಎಂದು ಹೆಸರಿಸಲಾಗಿದೆ.
ಕೂಲಿ ಕಾರ್ಮಿಕನಾಗಿರುವ ಅಮೀರ್ ಎಂದಿನಂತೆ ಶನಿವಾರ ಸಂಜೆ ಕೆಲಸ ಮುಗಿಸಿ ಕೂಡ ಶಂಶೀರ್ ಇಕ್ಬಾಲ್ ಮತ್ತು ರಿಜ್ವಾನ್ ಎಂಬವರ ಜೊತೆ ಸಜೀಪ ಮೂಡ ಗ್ರಾಮದ ಕಂಚಿನಡ್ಕಪದವಿನಲ್ಲಿನಲ್ಲಿರುವ ಅರ್ಧ ಮುಚ್ಚಲ್ಪಟ್ಟಿದ್ದ ಕೆಂಪು ಕಲ್ಲಿನ ಪಾಯದಲ್ಲಿ ಕೈಕಾಲು ತೊಳೆಯಲು ಗುಂಡಿಗೆ ಇಳಿದಿದ್ದರು.
ಆ ಸಂದರ್ಭದಲ್ಲಿ ಅಮೀರ್ ಆಯ ತಪ್ಪಿ ಗುಂಡಿಗೆ ಬಿದ್ದು ಗಾಯಗೊಂಡಿದ್ದ. ತಕ್ಷಣ ಸ್ಥಳೀಯರು ಅಮೀರ್ ನನ್ನು ಕೂಡಲೇ ದೇರಳಕಟ್ಟೆಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತಾದರೂ ಅದಾಗಲೇ ಗಾಯಾಳು ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ ಎಂದು ಕುಟುಂಬ ಮೂಲಗಳು ಹೇಳಿವೆ.
ಘಟನೆಯ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಾಯಕಾರಿ ಕೆಂಪು ಕಲ್ಲಿನ ಪಾಯಗಳು:
ಸಜೀಪ ಮೂಡ ಗ್ರಾಮದ ಕಂಚಿನಡ್ಕ ಪದವು ಎಂಬಲ್ಲಿ ಬಾಯ್ತೆರದು ಅಪಾಯವನ್ನು ಆಹ್ವಾನಿಸುವ ಹಲವಾರು ಕೆಂಪು ಕಲ್ಲಿನ ಪಾಯಗಳಿದ್ದು, ಅದನ್ನು ಪೂರ್ಣ ಪ್ರಮಾಣದಲ್ಲಿ ಮುಚ್ವದೆ ಹಾಗೆಯೇ ಬಿಡಲಾಗಿದೆ. ಇಂತಹ ಅವಘಡ ಸಂಭವಿಸಿದಾಗ ಮಾತ್ರ ಎಚ್ಚೆತ್ತುಕೊಳ್ಳುವ ಜಿಲ್ಲಾಡಳಿತ, ತಾಲೂಕಾಡಳಿತ, ಪೊಲೀಸ್ ಇಲಾಖೆ ಉಳಿದ ದಿನಗಳಲ್ಲಿ ಇದರ ಸಮೀಪವು ಸುಳಿಯದೆ ಹಾಗೆ ಬಿಡಲಾಗುತ್ತಿದೆ.
ಈ ರೀತಿಯ ಅವಘಡಗಳಾದಾಗ ಮಾತ್ರ ಹೇಳಿಕೆಗೆ ಸೀಮಿತಗೊಳಿಸಿ ಪ್ರಕಟಣೆ ಹೊರಡಿಸುವ ಈ ಇಲಾಖಾಧಿಕಾರಿಗಳು ನಂತರ ಮತ್ತೊಂದು ಅವಘಡಗಳಾದಾಗ ಎಚ್ಚರಿಕೆಯಾಗುತ್ತಾರೆ.
ಕಂಚಿನಡ್ಕ ಪದವು ಪರಿಸರದಲ್ಲಿ ಸಾಕಷ್ಟು ಅಕ್ರಮವಾಗಿ ಕೆಂಪು ಕಲ್ಲಿನ ಕೋರೆಯ ದಂಧೆ ನಡೆಯುತ್ತಿರುವ ಕುರಿತಾಗಿ ದೂರುಗಳು ಆಗಾಗ ಬರುತ್ತಲೆ ಇರುತ್ತದೆಯಲ್ಲದೆ ಕೆಂಪು ಕಲ್ಲು ಅಗೆದ ಬಳಿಕ ಈ ಗುಂಡಿಗಳನ್ನು ಮುಚ್ಚದೆ ಹಾಗೆಯೇ ಬಿಟ್ಟುಹೋಗಿದ್ದ ಬಗ್ಗೆ ಸಾರ್ವಜನಿಕರಿಂದ ಆಕ್ರೋಶಕ್ಕೂ ಕಾರಣವಾಗಿದ್ದು, ಇದೀಗ ಕೆಂಪುಕಲ್ಲಿನ ಹೊಂಡಕ್ಕೆ ಯುವಕನೋರ್ವ ಬಲಿಯಾಗಿದ್ದಾನೆ.
ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕದ ಮುಂಭಾಗದಲ್ಲಿಯೇ ಕೆಂಪುಕಲ್ಲು ಗಣಿಗಾರಿಕೆಯ ಹೊಂಡವನ್ನು ಮುಚ್ಚದಿರುವ ಹಿನ್ನಲೆಯಲ್ಲಿ ಮಳೆ ನೀರು ತುಂಬಿ ಅಪಾಯವನ್ನು ಆಹ್ವಾನಿಸುತ್ತಿದೆ. ಹೀಗಿದ್ದರೂ ಸ್ಥಳೀಯ ಗ್ರಾಮಪಂಚಾಯತ್ ಆಗಲೀ ಕಾಗದದ ಹುಲಿಗಳಾಗಿರುವ ಇತರೆ ಅಧಿಕಾರಿಗಳಾಗಲೀ ಇನ್ನು ಎಚ್ಚೆತ್ತಕೊಳ್ಳದಿರುವುದು ದುರಂತ ಎಂದು ಸ್ಥಳೀಯರು ಆರೋಪಿಸಿದ್ದಾರೆ,