ಕಟೀಲು ವಿದ್ಯಾಸಂಸ್ಥೆಯಲ್ಲಿನ ಶಾರದಾ ಪೂಜೆ
Tuesday, September 30, 2025
ಕಟೀಲು: ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನವರಾತ್ರಿಯ ಮೂಲಾನಕ್ಷತ್ರದ ದಿನ ಸೋಮವಾರ ಶಾರದಾ ಪೂಜೆ ನಡೆಯಿತು.
ಇಲ್ಲಿನ ಶಾರದಾ ಮೂರ್ತಿಯ ಮುಂದೆ ಪ್ರತಿ ಶುಕ್ರವಾರ ಪ್ರಾಥಮಿಕ ಶಾಲೆಯ ಮಕ್ಕಳು, ಪ್ರೌಢಶಾಲೆ ಹಾಗೂ ಪಿಯುಸಿ ವಿದ್ಯಾರ್ಥಿಗಳು ವಾರಕ್ಕೊಂದು ದಿನ ಭಜನೆ ಮಾಡುತ್ತಾರೆ. 1916ರಲ್ಲಿ ಕನ್ನಡ ಮಾಧ್ಯಮ ಶಾಲೆ ಆರಂಭಗೊಂಡಿತ್ತು. ಆ ಬಳಿಕ ಶಾಲೆಯಲ್ಲಿ ಸರಸ್ವತೀ ಮೂರ್ತಿಯನ್ನಿಟ್ಟು ವಾರವಾರ ಮಕ್ಕಳು ಭಜನೆ ಮಾಡುತ್ತಿದ್ದರು.
ಹೀಗೆ ದಶಕಗಳ ಇತಿಹಾಸ ಇರುವ ಶಾಲೆಯ ಕಟ್ಟಡ ಹತ್ತು ವರ್ಷಗಳ ಹಿಂದೆ ಅಜಾರಿಗೆ ಸ್ಥಳಾಂತರವಾದಾಗ ಈ ಶಾಲೆಯ ಸರಸ್ವತೀ ಮೂರ್ತಿ ಕೂಡ ಅಕ್ಷರಾನ್ನಂ ಕಟ್ಟಡಕ್ಕೆ ಸ್ಥಳಾಂತರವಾಯಿತು. ಆದರೆ ರಥಬೀದಿಯ ಶಾಲೆಯ ಸರಸ್ವತೀ ವಿಗ್ರಹವಿದ್ದ ಕಲಾಭವನ ಸರಸ್ವತೀ ಸದನ ಇಂದಿಗೂ ಕಟೀಲು ರಥಬೀದಿಯಲ್ಲಿ ನೂರಾರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಸರೆಯಾಗಿ ನಿಂತಿದೆ.
ಶಾಲೆಯ ಶಾರದಾ ಮೂರ್ತಿಗೆ ವರ್ಷಂಪ್ರತಿ ವಿದ್ಯಾರ್ಥಿಗಳೆಲ್ಲರೂ ಜೊತೆಯಾಗಿ ಭಜನೆ ಹೇಳಿ, ಪೂಜೆ ನಡೆದು ಪ್ರಸಾದ ವಿತರಣೆ ಆಗುತ್ತದೆ. ಹಳೆ ವಿದ್ಯಾರ್ಥಿಗಳೂ ಈ ಸಂದರ್ಭ ಭಾಗವಹಿಸುತ್ತಾರೆ.
ಸೋಮವಾರ ಅರ್ಚಕ ಶ್ರೀಕರ ಆಸ್ರಣ್ಣ ಆರತಿ ಬೆಳಗಿದರು. ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

