ಸೆ.21 ರಂದು ವಿಶ್ವ ಬನ್ನಂಜೆ 90ರ ನಮನ ಕಾರ್ಯಕ್ರಮ
ಮಂಗಳೂರು: ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಬೆಂಗಳೂರು, ಮಂಗಳಾದೇವಿ ಶ್ರೀರಾಮಕೃಷ್ಣ ಮಠ, ಬಹುವಚನಂ ಪುತ್ತೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ವಿಶ್ವ ಬನ್ನಂಜೆ 90ರ ನಮನ ಕಾರ್ಯಕ್ರಮ ಸೆ.21 ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಆಯೋಜಿಸಲಾಗಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಮಿತಿಯ ಗೌರವಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ಅಂದು ಪೂರ್ವಾಹ್ನ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ವೇದವ್ಯಾಸ ಆಚಾರ್ಯ ಶ್ರೀಶಾನಂದ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಮೂಡುಬಿದಿರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಂಜೆ 7 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭ ಶ್ರೀನಿವಾಸ ವಿವಿ ಕುಲಪತಿ ಸಿಎ ರಾಘವೇಂದ್ರ ರಾವ್ ಅವರಿಗೆ ಬನ್ನಂಜೆ ಗೌರವ ಸಮ್ಮಾನ ನಡೆಯಲಿದೆ ಎಂದರು.
ಡಾ.ಶ್ರೀಶ ಕುಮಾರ್ ಎಂ.ಕೆ ಪುತ್ತೂರು ಮಾತನಾಡಿ, ಬನ್ನಂಜೆ ಅವರ ಶಿಷ್ಯರು ಮತ್ತು ಸ್ಥಳೀಯ ವಿದ್ವಾಂಸರು ಬನ್ನಂಜೆ ಅವರ ಕುರಿತು ಮಾತನಾಡುವ ಎರಡು ಗೋಷ್ಠಿಗಳಿವೆ. ಸಮಾರೋಪ ಸಮಾರಂಭದಲ್ಲಿ ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥ ಶೀಗಳು ಅಧ್ಯಕ್ಷತೆ ವಹಿಸಿ, ಆಶೀರ್ವಚನ ನೀಡಲಿದ್ದಾರೆ. ಜಾನಪದ ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್, ರಂಗಕರ್ಮಿ ಸೇತುರಾಮ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಪ್ರಮುಖರಾದ ಸುಧಾಕರ ರಾವ್ ಪೇಜಾವರ, ಎಂ. ರವೀಂದ್ರ ಶೇಟ್, ರತ್ನಾಕರ ಜೈನ್ ಉಪಸ್ಥಿತರಿದ್ದರು.