ಆಹಾರ ಉದ್ಯಮದಲ್ಲೂ ಸಾಕಷ್ಟು ಸವಾಲುಗಳಿವೆ: ಪ್ರವೀಣ್ ಆಂಡ್ರ್ಯೂ

ಆಹಾರ ಉದ್ಯಮದಲ್ಲೂ ಸಾಕಷ್ಟು ಸವಾಲುಗಳಿವೆ: ಪ್ರವೀಣ್ ಆಂಡ್ರ್ಯೂ


ಮಂಗಳೂರು: ಸೂಕ್ಷ್ಮಾಣು ಜೀವಶಾಸ್ತ್ರವೂ ಆಹಾರ ಸುರಕ್ಷತೆಯ ಅವಿಭಾಜ್ಯ ಅಂಗವಾಗಿದ್ದು, ಆಹಾರ ಉದ್ಯಮಗಳು ಇಂದು ಸಾಕಷ್ಟು ಆಹಾರ ಸುರಕ್ಷತಾ ಸವಾಲುಗಳನ್ನು ಎದುರಿಸುತ್ತಿವೆ ಎಂದು ಎಫ್‌ಎಸ್‌ಎಸ್ ಖಾಸಗಿ ಸಂಸ್ಥೆಯ ದಕ್ಷಿಣ ಪ್ರಾಂತ್ಯದ ತಾಂತ್ರಿಕ ನಿರ್ದೇಶಕ ಹಾಗೂ ತರಬೇತುದಾರ ಪ್ರವೀಣ್ ಆಂಡ್ರ್ಯೂ ಹೇಳಿದರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗ, ಮಹಿಳಾ ವೇದಿಕೆ, ಉದ್ಯೋಗ ಕೋಶ, ಎಂಬಿಎಸ್‌ಐ ವಿದ್ಯಾರ್ಥಿ ಘಟಕ ಹಾಗೂ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಯೋಗದಿಂದಿಗೆ ಆಯೋಜಿಸಲಾಗಿದ್ದ ಆಹಾರ ಸುರಕ್ಷತೆ ತರಬೇತಿ ಮತ್ತು ಪ್ರಮಾಣಪತ್ರ ಕಾರ್ಯಕ್ರಮ ಕಾರ್ಯಾಗಾರ ನಡೆಯಿತು.

ದೇಶದಲ್ಲಿ ಪ್ರತಿ 50 ಕಿ.ಮೀ.ನಲ್ಲಿ ವಿಭಿನ್ನವಾದ ಆಹಾರ ದೊರೆಯುತ್ತದೆ. ಇಂದು ಹೋಟೆಲ್‌ಗಳಲ್ಲಿ ಸುಮಾರು 500-1000 ಪಾಕವಿಧಾನಗಳನ್ನು ತಯಾರಿಸುತ್ತಾರೆ. ಬೇಳೆ ಸಾರು, ಅನ್ನ ಸೇರಿದಂತೆ ನಾನಾ ಆಹಾರ ಪದಾರ್ಥಗಳನ್ನು ಪರೀಕ್ಷೆ ಮಾಡುವ ಮಾರ್ಗಸೂಚಿಗಳಿವೆ. ಆದರೆ, ಮೀನು, ಚಿಕನ್‌ನಿಂದ ತಯಾರಿಸಿದ ಪದಾರ್ಥಗಳನ್ನು ಪರೀಕ್ಷೆ ಮಾಡಲು ಯಾವುದೇ ಮಾರ್ಗಸೂಚಿ ಇಲ್ಲದೇ ಇರುವುದು ವಿಪರ್ಯಾಸ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಎಸ್., ಆಹಾರ ವಿಜ್ಞಾನವು ವಿಜ್ಞಾನದ ಆಸಕ್ತಿದಾಯಕ ಶಾಖೆಗಳಲ್ಲಿ ಒಂದಾಗಿದೆ. ರುಚಿಕರ ಆಹಾರ ತಿನ್ನುವ ಬಗ್ಗೆ ಯೋಚಿಸುತ್ತೇವೆಯೇ ಹೊರತು, ಸುರಕ್ಷತೆ ಬಗ್ಗೆ ಅಲ್ಲ. ನಿತ್ಯ ಯಾವುದೇ ಎರಡನೇ ಆಲೋಚನೆಯಿಲ್ಲದೇ ಕಲುಷಿತ ಆಹಾರ ಸೇವಿಸುತ್ತೇವೆ. ಕೆಲವೊಮ್ಮೆ ನಾವು ಸೇವಿಸುವ ಆಹಾರ ಎಲ್ಲಿ ತಯಾರಿಸಲಾಗುತ್ತದೆ ಅಥವಾ ಹೇಗೆ ತಯಾರಿಸಲಾಗುತ್ತದೆ ಎಂದೂ ಯೋಚನೆ ಮಾಡುವುದಿಲ್ಲ. ಹಾಗಾಗಿ ಆಹಾರ ಸುರಕ್ಷತೆಯ ನಿಯಮಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದರು.

ಇದೇ ವೇಳೆ ಕಾರ್ಯಕ್ರಮ ಸಂಯೋಜಕಿ ಹಾಗೂ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ಪ್ರಕಾಶ್, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಡಾ. ಸಿದ್ದರಾಜು ಎಂ.ಎನ್. ಸೇರಿದಂತೆ ನಾನಾ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article