
ಶ್ರೀ ಧವಲಾ ಕಾಲೇಜಿನಲ್ಲಿ ರಕ್ತದಾನ ಶಿಬಿರ
Wednesday, September 17, 2025
ಮೂಡುಬಿದಿರೆ: ಶ್ರೀ ಧವಲಾ ಕಾಲೇಜಿನ ಎನ್ನೆಸ್ಸೆಸ್ ಘಟಕದ ವತಿಯಿಂದ ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ, ಲಯನ್ಸ್ ಕ್ಲಬ್ ಮತ್ತು ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಇವುಗಳ ಸಹಯೋಗದಲ್ಲಿ ರಕ್ತದಾನ ಶಿಬಿರವು ಕಾಲೇಜಿನ ಎ.ವಿ. ಹಾಲ್ನಲ್ಲಿ ಬುಧವಾರ ಜರಗಿತು.
ಡಿಜೆವಿವಿ ಸಂಘದ ಕಾರ್ಯದರ್ಶಿ ಅಬಿಜಿತ್ ಎಂ.ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶ್ವೇತಾ ಜೈನ್ ಅವರು ಮಾತನಾಡಿ ಎಷ್ಟೇ ಹಣವಿದ್ದರೂ ರಕ್ತದ ಉತ್ಪಾದನೆ ಸಾಧ್ಯವಿಲ್ಲ. ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ರಕ್ತದ ಅವಶ್ಯಕತೆಯನ್ನು ಅರಿತು ಪ್ರತಿಯೊಬ್ಬರೂ ರಕ್ತದಾನ ಮಾಡಲು ಮುಂದೆ ಬರಬೇಕಾಗಿರುವುದು ಸಾಮಾಜಿಕ ಜವಾಬ್ದಾರಿಯಾಗಿದೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆಯವರು ಮಾತನಾಡಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಇಂದು ಎಲ್ಲಾ ಕಡೆ ಕಾಣಿಸುತ್ತಿದ್ದು ಆಸ್ಪತ್ರೆ ಸೇರಿರುವ ವ್ಯಕ್ತಿ ಬದುಕಿ ಉಳಿದು ಬರಬೇಕಾದರೆ ರಕ್ತದ ಅಗತ್ಯವಿದೆ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಾರ್ಶ್ವನಾಥ ಅಜ್ರಿಯವರು ಮಾತನಾಡಿ ರಕ್ತದಾನಿ ಒಬ್ಬ ಸೈಲೆಂಟ್ ಹೀರೋ, ಯಾಕೆಂದರೆ ತಾನು ನೀಡಿರುವ ರಕ್ತ ಯಾರಿಗೆ ಸೇರುತ್ತದೆ ಎಂಬುದೂ ಆತನಿಗೆ ತಿಳಿದಿರುವುದಿಲ್ಲ. ಅಂತೆಯೇ ವೈಯಕ್ತಿಕ ಲಾಭ, ಅಭಿಲಾಷೆಗಳೂ ರಕ್ತದಾನದ ಸಂದರ್ಭ ಆತನಲ್ಲಿ ಇರುವುದಿಲ್ಲ ಎಂದರು.
ಟೆಂಪಲ್ ಟೌನ್ ರೋಟರಿ ಅಧ್ಯಕ್ಷ ಹರೀಶ್ ಎಂ.ಕೆ., ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಕ್ಷತಾ ನಾಯಕ್, ವೆನ್ಲಾಕ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ನ ವಿದ್ಯಾ, ಆಂಟನಿ, ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಕ ಖಾದರ್ ಭಾಗವಹಿಸಿ ಶುಭ ಹಾರೈಸಿದರು.
ಮೂರೂ ಕ್ಲಬ್ಗಳ ಕಾರ್ಯದರ್ಶಿ ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎನ್ನೆಸ್ಸೆಸ್ ಅಧಿಕಾರಿ ಮಲ್ಲಿಕಾ ರಾವ್ ಸ್ವಾಗತಿಸಿದರು. ಶ್ರೇಯಾ ನಿರೂಪಿಸಿದ ಕಾರ್ಯಕ್ರಮದಲ್ಲಿ ರಶ್ಮಿ ವಂದಿಸಿದರು.