ಮೂಡುಬಿದಿರೆ: ತಮ್ಮ ನೋವುಗಳನ್ನು ಮರೆಮಾಚಿ ಇತರರ ಮುಖದಲ್ಲಿ ನಗುವನ್ನು ಮೂಡಿಸುವವರು ಛಾಯಾಗ್ರಾಹಕರು. ಇಂದು ನಾವು ಎಐ ಯುಗದಲ್ಲಿದ್ದೇವೆ. ಈ ಹೊಸ ತಂತ್ರಜ್ಞಾನಕ್ಕೆ ಛಾಯಾಗ್ರಾಹಕರು ಒಗ್ಗಿಕೊಂಡು, ಸೃಜನಶೀಲತೆಯೊಂದಿಗೆ ಮುನ್ನಡೆಯಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಜನರು ಸಂಕಷ್ಟದಲ್ಲಿದ್ದು ಅಂತಹವರಿಗೆ ಆಸೋಸಿಯೇಷನ್ ವತಿಯಿಂದ ಪ್ರೋತ್ಸಾಹ ನೀಡಿ. ಆರೋಗ್ಯ ಸಮಸ್ಯೆಗೆ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಮೂಲಕ ಮಾನವೀಯ ಸಂಬಂಧಗಳನ್ನು ಉಳಿಸಿ ಬೆಳೆಸುವಂತ್ತಾಗಬೇಕು ಎಂದು ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ನುಡಿದರು.
ಅವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ವತಿಯಿಂದ ಮಂಗಳವಾರ ರಾತ್ರಿ ಬೆಳುವಾಯಿ ಕಂಡಿಗ ಗ್ರೀನ್ಸ್ನಲ್ಲಿ ನಡೆದ ಮೂಡುಬಿದಿರೆ ವಲಯದ 2025-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, "ಪ್ರತಿ ಕ್ಷೇತ್ರದಂತೆ ಛಾಯಾಗ್ರಹಣ ಕ್ಷೇತ್ರದಲ್ಲಿಯೂ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಫೋಟೋಗ್ರಫಿಯಲ್ಲಿ ಹಲವಾರು ಅವಕಾಶಗಳಿವೆ. ತಂತ್ರಜ್ಞಾನದ ಕ್ರಾಂತಿಗೆ ನಾವು ಹೊಂದಿಕೊಳ್ಳಬೇಕಾಗಿದೆ. ಸೃಜನಶೀಲತೆಯೊಂದಿಗೆ ಛಾಯಾಗ್ರಾಹಕರು ಮುನ್ನಡೆಯಬೇಕಾಗುತ್ತದೆ. ಎಐ, ಎಡಿಟಿಂಗ್ನಂತಹ ಕಾರ್ಯಾಗಾರಗಳು ಸಕಾಲದಲ್ಲಿ ನಡೆಯುತ್ತಿರಬೇಕು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಖ್ಯಾತಿಗೆ ಛಾಯಾಗ್ರಾಹಕರ ಕೊಡುಗೆ ಅನನ್ಯವಾದುದು ತಮ್ಮ ಯಾವುದೇ ಉತ್ತಮ ಕೆಲಸಗಳಿಗೆ ಆಳ್ವಾಸ್ ಸಂಸ್ಥೆ ಸಹಕಾರ ನೀಡಲು ಸಿದ್ಧ ಎಂದರು.
ಆಲಂಗಾರು ಚರ್ಚ್ನ ಧರ್ಮಗುರು ಫಾ. ಮೆಲ್ವಿನ್ ನೊರೋನ್ಹ ಮಾತನಾಡಿ, ಸಾಮಾಜಿಕ ಅಭಿವೃದ್ಧಿಗೆ ಛಾಯಾಗ್ರಾಹಕರ ಸೇವೆ ಪ್ರಶಂಸನೀಯ. ಫೋಟೋಗ್ರಾಫರ್ ಕೆಲಸವು ಅತ್ಯುತ್ತಮ ಮಾತ್ರವಲ್ಲ, ಕಷ್ಟಕರವಾದ ಕೆಲಸವೂ ಹೌದು. ತಾಳ್ಮೆ, ಏಕಾಗ್ರತೆ ಮತ್ತು ಕರಕುಶಲತೆಯಿಂದ ಕೂಡಿದ ಛಾಯಾಗ್ರಾಹಕ ಮಾತ್ರ ಸಾಧನೆ ಮಾಡಲು ಸಾಧ್ಯ. ಹಿಂದಿನ ಸುಂದರ ನೆನಪುಗಳನ್ನು ಮತ್ತೆ ಜೀವಂತಗೊಳಿಸುವ ಮಹತ್ವದ ಕೆಲಸ ಛಾಯಾಗ್ರಾಹಕರಿಂದ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಂಘಟನೆಯ ಜಿಲ್ಲಾಧ್ಯಕ್ಷ ನವೀನ್ ರೈ ಪಂಜಳ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಂದರ್ಭದಲ್ಲಿ ನಿಯೋಜಿತ ಅಧ್ಯಕ್ಷರಾಗಿ ನಿತಿನ್ ಬೆಳುವಾಯಿ, ಪ್ರಧಾನ ಕಾರ್ಯದರ್ಶಿಯಾಗಿ ನಮಿತ್ ಬಂಗೇರ, ಮತ್ತು ಕೋಶಾಧಿಕಾರಿಯಾಗಿ ಪದ್ಮನಾಭ ಮಿಜಾರ್ ಸಹಿತ ನೂತನ ಪದಾಧಿಕಾರಿಗಳಿಗೆ ನಿರ್ಗಮಿತ ಪದಾಧಿಕಾರಿಗಳು ಅಧಿಕಾರ ಹಸ್ತಾಂತರಿಸಿದರು.
ಧನಲಕ್ಷ್ಮಿ, ರೆಮೋನಾಗೆ ಸನ್ಮಾನ:
ವಿಶ್ವಕಪ್ ವಿಜೇತ ಭಾರತೀಯ ಮಹಿಳಾ ಕಬಡ್ಡಿ ತಂಡದ ಆಟಗಾರ್ತಿ ಧನಲಕ್ಷ್ಮಿ ಪೂಜಾರಿ ಹಾಗೂ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ವಿಶ್ವದಾಖಲೆ ಸಾಧಕಿ ರೆಮೋನಾ ಇವೇಟ್ ಪಿರೇರಾ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿ ಶ್ರೇಯಸ್ ಕಾರಂತ್ ಅವರನ್ನು ಅಭಿನಂದಿಸಲಾಯಿತು. ಕಚಗುಳಿ ನಗುಮಗು ಸ್ಪರ್ಧೆಗೆ ಬಹುಮಾನ ವಿತರಿಸಲಾಯಿತು. ತೀರ್ಪುಗಾರರನ್ನು ಸನ್ಮಾನಿಸಲಾಯಿತು. ಜಿಲ್ಲಾ ಸಂಘಟನೆ ಹಾಗೂ ಮೂಡುಬಿದಿರೆ ಘಟಕದ ನಿಕಟಪೂರ್ವ ಪದಾಧಿಕಾರಿಗಳನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ಆನಂದ ಬಂಟ್ವಾಳ, ಎಸ್.ಕೆ.ಪಿ. ವಿವಿಧೋದ್ದೇಶ ಸಹಕಾರಿ ಸಂಘದ ನಿಯಮಿತದ ಅಧ್ಯಕ್ಷ ವಾಸುದೇವ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಯ್ ಕುಮಾರ್, ಜಿಲ್ಲಾ ಸಲಹಾ ಸಮಿತಿ ಸಂಚಾಲಕ ಗೋಪಾಲ್ ಸುಳ್ಯ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವಿ.ಎಸ್ ಕೋಟ್ಯಾನ್, ಮೂಡುಬಿದಿರೆ ಘಟಕದ ಗೌರವಾಧ್ಯಕ್ಷ ಉದಯ ಕುಮಾರ್ ಭಟ್, ನಿಕಟಪೂರ್ವ ಅಧ್ಯಕ್ಷ ರಾಜೇಶ್ ಅಮೀನ್, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕಾಶಿಪಟ್ಣ, ನಿಕಟಪೂರ್ವ ಕಾರಯದರ್ಶಿ ರಂಜಿತ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಕಟ್ಟಡ ಸಮಿತಿಯ ವಲಯ ಪ್ರತಿನಿಧಿ ವಿಲ್ಫ್ರೇಡ್ ಮೆಂಡೋನ್ಸ ಅವರು ಪ್ರಸ್ತಾವನೆಗೈದು, ಸ್ವಾಗತಿಸಿದರು. ಪ್ರಮೋದ್ ಪಾಲಡ್ಕ ಹಾಗೂ ಪ್ರಸಾದ್ ಬೆಳುವಾಯಿ ಸನ್ಮಾನಪತ್ರಗಳನ್ನು ವಾಚಿಸಿದರು. ಬಬಿತಾ ಲತೀಶ್ ಕಾರ್ಯಕ್ರಮ ನಿರೂಪಿಸಿದರು.