ಗ್ರಾ.ಪಂ. ಅಧ್ಯಕ್ಷರಿಂದ ಸ್ವಜನ ಪಕ್ಷಪಾತ ಅಧಿಕಾರ ದುರುಪಯೋಗ ಸಾಬೀತು: ಅಧ್ಯಕ್ಷರ ವಜಾ
ಪ್ರಕರಣದ ವಿವರ:
ಕರುಣಾಕರ ಶೆಟ್ಟಿ ಅವರು ತಮ್ಮ ಸಹೋದರಿಯಾದ ಅಕ್ಕಯ್ಯ ಅಲಿಯಾಸ್ ಅನಿತಾ ಕೆ. ಶೆಟ್ಟಿ ಅವರಿಗೆ ಪಿಡಬ್ಲ್ಯೂಡಿ ರಸ್ತೆ ಮಾರ್ಜಿನ್ ಒಳಗೆ ಇರುವ ವಾಣಿಜ್ಯ ಉದ್ದೇಶದ ಕಟ್ಟಡ ನಿರ್ಮಾಣಕ್ಕೆ ನಿಯಮಬಾಹಿರವಾಗಿ ನಿರಾಕ್ಷೇಪಣಾ ಪತ್ರ ನೀಡಿದ್ದರು. ಇದನ್ನು ಪತ್ತೆ ಮಾಡಿದವರು ಶೆಟ್ಟರ ವಿರುದ್ಧ ಕಾನೂನು ಹೋರಾಟ ನಡೆಸಿದ್ದರು. ಪ್ರಕರಣದಲ್ಲಿ ತನಿಖೆಯಲ್ಲಿ ಅಕ್ರಮ ದೃಢಪಟ್ಟಿದೆ.
ಈ ಸಂಬಂಧ ಬೇಳೂರು ಗ್ರಾಮದ ಮಧುಕರ ಶೆಟ್ಟಿ ಅವರು, ನ್ಯಾಯವಾದಿಗಳ ಸಲಹೆಯಂತೆ 2017ರಲ್ಲಿ ಕರ್ನಾಟಕ ಲೋಕಾಯುಕ್ತಕ್ಕೆ (ಎಂ.ವೈ.ಎಸ್. 9466/2017) ದೂರು ಸಲ್ಲಿಸಿದ್ದರು. ದೂರಿನ ಆಧಾರದಲ್ಲಿ ಲೋಕಾಯುಕ್ತರು ಪಂಚಾಯತ್ ರಾಜ್ ಅಧಿನಿಯಮದ ಅಡಿಯಲ್ಲಿ ವಿಚಾರಣೆ ನಡೆಸುವಂತೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ವಹಿಸಿದ್ದರು.
ಪ್ರಾದೇಶಿಕ ಆಯುಕ್ತರು ನಡೆಸಿದ ಸವಿಸ್ತಾರ ವಿಚಾರಣೆಯಲ್ಲಿ ಬಿ.ಕರುಣಾಕರ ಶೆಟ್ಟಿ ಅವರು ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು ಸ್ಪಷ್ಟವಾಗಿ ಸಾಬೀತಾಗಿದ್ದು, ಅದರ ವಿಚಾರಣಾ ವರದಿ ಹಾಗೂ ದಾಖಲೆಗಳನ್ನು ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಲಾಗಿತ್ತು.
ಈ ವರದಿಯನ್ನು ಆಧರಿಸಿ, ಕರ್ನಾಟಕ ಸರ್ಕಾರವು ಆರ್ಡಿಪಿಆರ್ 449 ಜಿಪಿಎ ಜಿಪಿಎ 2025 ಆದೇಶ ಸಂಖ್ಯೆ, ದಿನಾಂಕ 05-01-2026 ರಂತೆ, ಬಿ.ಕರುಣಾಕರ ಶೆಟ್ಟಿ ಅವರನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಸದಸ್ಯ ಸ್ಥಾನದಿಂದ ವಜಾಗೊಳಿಸಿ, ಮುಂದಿನ ಆರು ವರ್ಷಗಳ ಕಾಲ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿ ಅಂತಿಮ ಆದೇಶ ಹೊರಡಿಸಿದೆ.
ಕೋರ್ಟ್ ಆದೇಶ:
2017-18ನೇ ಸಾಲಿನಲ್ಲಿ ಸಹೋದರಿ ಅನಿತಾ ಶೆಟ್ಟಿ ಅವರ ರಸ್ತೆ ಮಾರ್ಜಿನ್ನಲ್ಲಿದ್ದ ವಾಣಿಜ್ಯ ಕಟ್ಟಡವನ್ನು ತೆರವುಗೊಳಿಸುವಂತೆ ಕುಂದಾಪುರ ತಾಲೂಕು ಪಂಚಾಯತ್ ನ್ಯಾಯಾಲಯ ಆದೇಶಿಸಿತ್ತು. ಈ ಪ್ರಕರಣದಲ್ಲಿ ನ್ಯಾಯವಾದಿಗಳು ಕೋರ್ಟಿಗೆ ಹಾಜರುಪಡಿಸಿದ್ದ ದಾಖಲಾತಿಗಳು ಇತ್ತೀಚಿನ ಸದಸ್ಯತ್ವ ರದ್ದು ಆದೇಶಕ್ಕೆ ಪ್ರಮುಖ ಆಧಾರವಾಗಿವೆ.
ಈ ಪ್ರಕರಣವು ಸ್ಥಳೀಯ ಆಡಳಿತದಲ್ಲಿ ಅಧಿಕಾರ ದುರುಪಯೋಗದ ವಿರುದ್ಧ ಸರ್ಕಾರ ಕೈಗೊಂಡಿರುವ ಕಠಿಣ ಕ್ರಮಕ್ಕೆ ಉದಾಹರಣೆಯಾಗಿದೆ. ಈ ಪ್ರಕರಣ ಇದೀಗ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ಹುಟ್ಟುಹಾಕಿದೆ.