ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಬಡವರಲ್ಲಿ ಕ್ಷಮೆ ಕೇಳಬೇಕು
ಮಂಗಳೂರು: ಯಲಹಂಕದ ಕೋಗಿಲು ಬಡಾವಣೆಯ ಫಕೀರ ಕಾಲೋನಿಗೆ ಭೇಟಿ ನೀಡಿದ್ದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ತಮ್ಮ ಕೊಳಕು ರಾಜಕೀಯ ಉದ್ದೇಶಗಳಿಗಾಗಿ ಬಡ ಮಹಿಳೆಯನ್ನು ಬೆದರಿಸಿ ಅವಮಾನಿಸಿದ್ದು, ತಕ್ಷಣವೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಬಡವರ ದುಃಖ-ದುರಂತದಲ್ಲಿಯೂ ಕೋಮುವಾದದ ಬೀಜ ಬಿತ್ತುವ ಅವರ ಈ ಹೀನ ಮತ್ತು ಅಮಾನವೀಯ ವರ್ತನೆ ಅತ್ಯಂತ ಖಂಡನೀಯ. ಸೂರು ಕಳೆದುಕೊಂಡ ಸಂತ್ರಸ್ತರಿಗೆ ಧೈರ್ಯ ಹೇಳಬೇಕಾದ ವಿರೋಧ ಪಕ್ಷದ ನಾಯರೊಬ್ಬರಿಂದ ಸಂತ್ರಸ್ತರಿಗೇ ಅವಮಾನಗೊಳಿಸಿ, ಅವರನ್ನು ಹೊರ ದೇಶದವರು ಎಂದು ಹೀಯಾಳಿಸುವುದು ನಮ್ಮ ರಾಜ್ಯದ ದೊಡ್ಡ ದುರಂತ.
ಆರ್. ಅಶೋಕ ಸಂಘ ಪರಿವಾರದ ನಾಯಕರನ್ನು ಮೆಚ್ಚಿಸಲು ಭೇಟಿ ನೀಡಿದ್ದು, ಅಲ್ಲದೇ ಮುಸ್ಲಿಂ ಮಹಿಳೆಯ ಅರೆಬರೆ ಕನ್ನಡ ಮಾತಾಡಿದ್ದನ್ನೇ ನೆಪವಾಗಿಟ್ಟುಕೊಂಡು ಅವರ ನಾಗರಿಕತೆಯನ್ನು ಪ್ರಶ್ನಿಸುವುದು ನೋಡಿದರೆ ಅಮಾನವೀಯ. ಅವರ ಮುಸ್ಲಿಂ ವಿರೋಧಿ ಧೋರಣೆ ಅನಾವರಣಗೊಂಡಿದೆ. ಇಷ್ಟು ದಿನ ಪಾಕಿಸ್ತಾನದ ಜಪ ಮಾಡುತ್ತಿದ್ದ ಬಿಜೆಪಿ ಸಂಘ ಪರಿವಾರದ ನಾಯಕರು ಈಗ ಬಾಂಗ್ಲಾದೇಶದ ಜಪ ಮಾಡುತ್ತಿದ್ದಾರೆ. ಅವರ ಉದ್ದೇಶ ಸ್ಪಷ್ಟವಾಗಿದೆ ಮುಂದಿನ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿಯೇತರ ರಾಜ್ಯಗಳಲ್ಲಿ ಬಾಂಗ್ಲಾದೇಶದ ನಿವಾಸಿಗಳು ನೆಲೆಸಿದ್ದಾರೆ ಎಂದು ಗುಲ್ಲೆಬ್ಬಿಸುತ್ತಿದ್ದಾರೆ.
ಕೋಗಿಲು ಲೇಔಟ್ ಬಗ್ಗೆ ಕೇರಳ ಸೇರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದನ್ನು ನೆಪವಾಗಿಟ್ಟುಕೊಂಡು, ಕೋಗಿಲು ಕ್ರಾಸ್ನ ಫಕೀರ್ ಬಡಾವಣೆ ಕ್ರಮೇಣ ಸ್ಲೀಪರ್ ಸೆಲ್ಗಳ ಕೇಂದ್ರವಾಗುವ ಅಪಾಯವಿದೆ. ಬಾಂಗ್ಲಾದವರಿಂದಾಗಿ ಪಶ್ಚಿಮ ಬಂಗಾಳ ಹೊತ್ತಿ ಉರಿಯುತ್ತಿದೆ. ಮುಂದೆ ಕರ್ನಾಟಕವೂ ಹೀಗೆಯೇ ಆಗಲಿದೆ. ಆದ್ದರಿಂದ ಮೊದಲು ಇಲ್ಲಿನವರ ಪೌರತ್ವ ಪರಿಶೀಲಿಸುವ ಕಾರ್ಯ ಆಗಬೇಕು ಎಂದು ಹೇಳಿರುವ ಅಶೋಕ ಅಕ್ರಮ ಬಾಂಗ್ಲಾ ನಿವಾಸಿಗಳು ಬರಬೇಕಾದರೆ ದೇಶದಲ್ಲಿನ ಗೃಹ ಸಚಿವರು ವೈಫಲ್ಯವಲ್ಲವೇ, ಹಾಗಾದರೆ ಮೊದಲು ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ತಾಹಿರ್ ಹುಸೇನ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.