ಸಹಕಾರಿ ಸಂಘದಲ್ಲಿ ನಕಲಿ ಚಿನ್ನದ ಸರ ಅಡವಿಟ್ಟು ಸಾಲಪಡೆಯಲೆತ್ನಿಸಿದ ಇಬ್ಬರ ಬಂಧನ
ಬಂಟ್ವಾಳ: ಸಾಲ ಪಡೆಯುವ ಉದ್ದೇಶದಿಂದ ನಕಲಿ ಚಿನ್ನದ ಸರವನ್ನು ಅಡವಿಡಲು ಮಡಂತ್ಯಾರಿನಲ್ಲಿರುವ ಸಹಕಾರಿ ಸಂಘವೊಂದಕ್ಕೆ ಬಂದಿದ್ದ ಇಬ್ಬರು ವಂಚಕರು ಪುಂಜಾಲಕಟ್ಟೆ ಪೊಲೀಸರ ಅತಿಥಿಯಾಗಿದ್ದಾರೆ.
ಕುಳ ಕಲ್ಲಂದಡ್ಕ ನಿವಾಸಿ ಅಬ್ದುಲ್ ನಜೀರ್ ಹಾಗೂ ಕಲ್ಲಡ್ಕ ಸಮೀಪದ ಬೋಳಂತೂರು ಬೀರುಕೋಡಿ ನಿವಾಸಿ ಪ್ರಮೋದ್ ಪಿ. ಬಂಧಿತರಾಗಿದ್ದಾರೆ.
ಸೋಮವಾರ ಆರೋಪಿಗಳಿಬ್ಬರು ಒಡಿಯೂರು ಶ್ರೀ ವಿವಿದ್ದೋದೇಶ ಸೌಹಾರ್ದ ಸಹಕಾರಿ ಸಂಘದ ಮಡಂತ್ಯಾರು ಶಾಖೆಯಲ್ಲಿ ಮೂರು ಚಿನ್ನದ ಸರಗಳನ್ನು ಅಡವಿಟ್ಟು ಸಾಲ ಪಡೆಯಲು ಮುಂದಾಗಿದ್ದರು.
ಶಾಖಾ ವ್ಯವಸ್ಥಾಪಕಿ ಅಶ್ವಿತಾ ಅವರು ಚಿನ್ನವನ್ನು ಪರೀವೀಕ್ಷಕರಲ್ಲಿ ಪರಿಶೀಲನೆ ನಡೆಸಿದಾಗ ಮೂರು ಚಿನ್ನದ ಸರಗಳು ನಕಲಿ ಎಂದು ಖಚಿತಪಟ್ಟಿರುವ ಹಿನ್ನಲೆಯಲ್ಲಿ ಪುಂಜಾಲಕಟ್ಟೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು. ಆರೋಪಿಗಳು ಈ ಹಿಂದೆ ಇಂತಹ ಕೃತ್ಯ ನಡೆಸಿದ್ದಾರೆಯೇ ಎಂಬ ಬಗ್ಗೆ ತನಿಖೆಗೊಳಪಡಿಸಲಾಗುತ್ತಿದೆ.
ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.