ವಿಮಾನ ಸಂಚಾರ ರದ್ದು: ಮುಂದುವರೆದ ಆತಂಕ
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಾ.೩ರಂದು ದುಬೈ, ದೋಹ, ದಮ್ಮಾಮ್, ಖತರ್, ಅಬುಧಾಬಿಗೆ ಹೊರಡಬೇಕಿದ್ದ ವಿಮಾನ ಸಂಚಾರವನ್ನು ರದ್ದುಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಇಸ್ರೇಲ್-ಅಮೇರಿಕಾ ದಾಳಿಗೆ ಪ್ರತಿಯಾಗಿ ಇರಾನ್ ಗಲ್ಫ್ ರಾಷ್ಟ್ರಗಳಲ್ಲಿ ಅಮೇರಿಕಾ ಸೇನಾ ನೆಲೆ ಸಹಿತ ಹಲವು ಪ್ರಮುಖ ಕೇಂದ್ರಗಳ ಮೇಲೆ ನಡೆಸಿರುವ ದಾಳಿಯಿಂದಾಗಿ ವಿಷಮ ಪರಿಸ್ಥಿತಿ ಎದುರಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗಲ್ಫ್ ರಾಷ್ಟ್ರಗಳಿಗೆ ತೆರಳುವ ವಿಮಾನ ಸಂಚಾರವನ್ನು ರದ್ದುಪಡಿಸಲಾಗಿದೆ. ಈ ದಾಳಿಯಿಂದ ಗಲ್ಫ್ನಲ್ಲಿ ನೆಲೆಸಿರುವ ಕರಾವಳಿ ಕನ್ನಡಿಗರಲ್ಲಿ ಮಾತ್ರವಲ್ಲ ಇಲ್ಲಿನ ಅವರ ಕುಟುಂಬಸ್ಥರಲ್ಲೂ ಆತಂಕ ಸೃಷ್ಟಿಯಾಗಿದೆ.
ತ್ರಿಶಂಕು ಸ್ಥಿತಿ:
ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ ಮತ್ತು ಉಡುಪಿಯಿಂದ ಸಾವಿರಾರು ಮಂದಿ ಉದ್ಯೋಗ ನಿಮಿತ್ತ ಗಲ್ಫ್ನಲ್ಲಿದ್ದು, ಈ ಮಂದಿಯ ಕುಟುಂಬದವರು ಆತಂಕದಲ್ಲಿ ದಿನ ದೂಡುವಂತಾಗಿದೆ. ಗಲ್ಫ್ನಿಂದ ಊರಿಗೆ ಬಂದವರು, ಊರಿನಿಂದ ಗಲ್ಫ್ಗೆ ಹೋದವರು ವಿಮಾನ ರದ್ದಾದ ಹಿನ್ನೆಲೆಯಲ್ಲಿ ‘ತ್ರಿಶಂಕು’ ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ. ಕೆಲವರು ಅಗತ್ಯ ಕೆಲಸಗಳಿಗಾಗಿ, ಶುಭ ಸಮಾರಂಭಗಳಿಗಾಗಿ ಊರಿಗೆ ಬಂದಿದ್ದಾರೆ. ಇವರ ಕುಟುಂಬ ಗಲ್ಫ್ನಲ್ಲಿದೆ. ಇಲ್ಲಿಂದ ಗಲ್ಪ್ಗೆ ಹೋಗಲಾಗುತ್ತಿಲ್ಲ. ಅನಿವಾರ್ಯವಾಗಿ ಆತಂಕದಿಂದಲೇ ದಿನ ಕಳೆಯುವಂತಾಗಿದೆ.
ಕರಾವಳಿಗರಲ್ಲಿ ಗೊಂದಲ, ಆತಂಕ ಮುಂದುವರಿದಿದೆ. ಆದರೆ ಸದ್ಯ ದೊಡ್ಡ ಅಪಾಯ ಕಂಡುಬಂದಿಲ್ಲ. ವಿಮಾನ ಸಂಚಾರ ಸ್ಥಗಿತವಾಗಿರುವುದರಿಂದ ಸಮಸ್ಯೆಯಾಗಿದೆ. ಉಳಿದಂತೆ ತುಂಬಾ ಸಮಸ್ಯೆಯಾಗಿಲ್ಲ ಎಂದು ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ಅನೇಕ ಮಂದಿ ಕರಾವಳಿಗರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಪರಿಸ್ಥಿತಿ ಹೀಗೆ ಮುಂದುವರಿದರೆ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ.