ರೈಲು ಹೋರಾಟ ಸಮಿತಿಯಿಂದ ಹೆಚ್.ಡಿ. ದೇವೇಗೌಡರಿಗೆ ಮನವಿ
Monday, March 2, 2026
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಕ್ರಮ ವಹಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಕಡಬ ತಾಲೂಕು ರೈಲ್ವೇ ಸ್ಟೇಷನ್ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಹೆಚ್.ಡಿ. ದೇವೇಗೌಡ ಅವರಿಗೆ ಮನವಿ ಸಲ್ಲಿಸಲಾಯಿತು.
ಸುಬ್ರಹ್ಮಣ್ಯದಲ್ಲಿ ಹೆಚ್.ಡಿ. ದೇವೇಗೌಡ ಅವರನ್ನು ಸಮಿತಿಯ ಸಯ್ಯದ್ ಮೀರಾ ಸಾಹೇಬ್ ಅವರ ನೇತೃತ್ವದಲ್ಲಿ ಭೇಟಿ ಮಾಡಿ ರೈಲ್ವೇ ಬೇಡಿಕೆಗಳ ಬಗ್ಗೆ ಚರ್ಚಿಸಿದರು. ಸುಬ್ರಹ್ಮಣ್ಯ ರೋಡ್ನಿಲ್ದಾಣದಲ್ಲಿ ಈ ಹಿಂದೆ ಮಂಜೂರಾತಿ ಆದ ಕೆಲಸಗಳನ್ನು ಕೂಡಲೇ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡುವುದು, ಬೆಂಗಳೂರು, ಮಂಗಳೂರು ಎಕ್ಸ್ಪ್ರೆಸ್ ರೈಲುಗಳಿಗೆ ಕಡಬ ತಾಲೂಕು ಕೇಂದ್ರದ ಕೋಡಿಂಬಾಳ ರೈಲು ನಿಲ್ದಾಣದಲ್ಲಿ ಎರಡು ನಿಮಿಷ ನಿಲುಗಡೆ ನೀಡುವುದು, ನೆಟ್ಟಣ ಪೇಟೆಯಿಂದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ ಸಂಪರ್ಕ ರಸ್ತೆಯ ದುರಸ್ತಿ ಮಾಡುವುದು, ಕೋಡಿಂಬಾಳ ರೈಲು ನಿಲ್ದಾಣ ಸಂಪರ್ಕರಸ್ತೆ ರೈಲ್ವೇ ಇಲಾಖೆಯ ಸಂಬಂಧಿಸಿದ ಜಾಗವಾಗಿದ್ದು, ಒಂದು ಕೋಟಿ ರೂ. ಅನುದಾನ ಒದಗಿಸಿ ಅಭಿವೃದ್ಧಿ ಮಾಡುವುದು, ರೈಲ್ವೇ ಪೊಲೀಸ್ ಹಾಗೂ ಲೋಕಲ್ ಪೊಲೀಸ್ ಠಾಣೆ ರಚನೆ, ಪೊಲೀಸ್ ಕಾರ್ಯಾಚರಣೆ ತೊಡಗಿಸುವುದು, ತುರ್ತುಮೆಡಿಕಲ್ ಡಾಕ್ಟರ್, ಸಿಬ್ಬಂದಿ, ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು ಮೊದಲಾದ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಲಾಯಿತು.