ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರ ಲಕ್ಷಾಂತರ ರೂ.ವಿನ ಚಿನ್ನಾಭರಣ, ನಗದು ಇದ್ದ ಪರ್ಸ್ ಕಳವು
ಬಂಟ್ವಾಳ: ಕೆ.ಎಸ್.ಆರ್.ಟಿ.ಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರ ಲಕ್ಷಾಂತರ ರೂ. ಮೌಲ್ಯದ ನಗ, ನಗದು ಇರಿಸಲಾದ ಪರ್ಸ್ ಕಳವಾದ ಘಟನೆ ನಡೆದಿದ್ದು, ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಾಗೆಕಾನ ಬಲ್ಯ ನಿವಾಸಿ ಕ್ರಿಸ್ತಿನ್ ವೇಗಸ್ ಅವರ ನಗ-ನಗದು ಇದ್ದ ಪರ್ಸ್ ಕಳವಾಗಿದೆ.
ಪರ್ಸ್ನಲ್ಲಿ ಐದುವರೆ ಪವನ್ ತೂಕದ ಚಿನ್ನದ ಕರಿಮಣಿ ಸರ ಮತ್ತು ನಾಲ್ಕು ಗ್ರಾಂ ತೂಕದ ಚಿನ್ನದ ಉಂಗುರ ಒಟ್ಟು 48 ಗ್ರಾಂ. ತೂಕದ ಚಿನ್ನಾಭರಣ ಮತ್ತು ಸುಮಾರು 3500 ಸಾ.ರೂ. ನಗದು, ಎಟಿಎಂ, ವೋಟರ್ ಐಡಿ ಕಾಡ್೯ನ್ನು ಚಿಕ್ಕ ಪರ್ಸಿನಲ್ಲಿಟ್ಟು ಅದನ್ನು ದೊಡ್ಡಪರ್ಸಿನಲ್ಲಿಟ್ಟಿದ್ದರೆನ್ನಲಾಗಿದೆ.
ಇವರು ಗಂಡನ ಜೊತೆ ಉಜಿರೆಯಲ್ಲಿ ಸಂಬಂಧಿಕರ ಮೆಹಂದಿ ಕಾರ್ಯಕ್ರಮಕ್ಕೆ ಹೋಗಿ ವಾಪಸು ಮಂಗಳೂರು ಕಡೆಗೆ ಬರುವ ಬಸ್ನಲ್ಲಿ ಘಟನೆ ಸಂಭವಿಸಿದೆ.
ಬಿ.ಸಿ.ರೋಡಿನಲ್ಲಿ ಬಸ್ ಇಳಿದು ನೋಡುವಾಗ ಪಸ್೯ ಕಳವಾದ ವಿಚಾರ ಬೆಳಕಿಗೆ ಬಂದಿದೆ. ಕಳವಾದ ಚಿನ್ನಾಭರಣ ಸಹಿತ ನಗದು ಸೇರಿ ಒಟ್ಟು ಮೌಲ್ಯ 6.24 ಲ.ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ದೂರಿನಲ್ಲಿ ಬಂಟ್ವಾಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.