ಶೂನ್ಯ ಕಸ ನಿರ್ವಹಣೆ ಸುಸ್ಥಿರ ಪರಿಹಾರೋಪಾಯ: ಮಂಗಳೂರು ವಿವಿ ಕ್ಯಾಂಪಸ್ ಬೆಂಕಿಗೆ ಸಿಗಲಿದೆ ಮುಕ್ತಿ
ಕೊಣಾಜೆ ಗಣೇಶ್ ಮಹಲ್ ಪ್ರದೇಶದ ಡಂಪಿಂಗ್ ಯಾರ್ಡ್ ಕಸಾಲಯದ ಬೆಂಕಿಯಿಂದ ಹಲವಾರು ವರ್ಷಗಳಿಂದ ಹೊರಬರುತ್ತಿರುವ ಹೊಗೆಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ವಿವಿಧ ಕ್ಷೇತ್ರಗಳ ಸಮಾನ ಮನಸ್ಕರ ತಂಡ ಸ್ಥಳ ಪರಿಶೀಲನೆ ನಡೆಸಿ ಮಂಗಳೂರು ವಿವಿ, ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಗ್ರಾಮ ಪಂಚಾಯತ್ ಅಧಿಕಾರಿಗಳನ್ನು ಸಂಪರ್ಕಿಸಿ ತುರ್ತು ಕ್ರಮಕ್ಕೆ ಆಗ್ರಹಿಸಿದೆ.
ಬಳಿಕ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷದ ಹೊಗೆ ಉಗುಳು ತ್ತಿರುವ ಡಂಪಿಂಗ್ ಯಾರ್ಡ್ನ್ನು ಸ್ವಚ್ಛಗೊಳಿಸಿ ಸಮತಟ್ಟು ಮಾಡಿ ಸದ್ರಿ ಸ್ಥಳದಲ್ಲಿ ಸಾರ್ವಜನಿಕರು ಕಸ ಎಸೆಯುವುದನ್ನು ತಡೆಯಲು ಸಿಸಿ ಕ್ಯಾಮೆರಾ ಅಳವಡಿಸುವುದು, ವಿವಿ ಕಸವನ್ನು ಮೂಲದಲ್ಲೇ ವಿಂಗಡಿಸಿ ಹಸಿ ಕಸದಿಂದ ಕ್ಯಾಂಪಸ್ನಲ್ಲೇ ಗೊಬ್ಬರ ತಯಾರಿಸುವುದು, ಪ್ಲಾಸ್ಟಿಕ್ ಮತ್ತಿತರ ಒಣ ಕಸಗಳನ್ನು ಸ್ವಚ್ಚ ಸಂಕೀರ್ಣಕ್ಕೆ ನೀಡಿ ಪುನರ್ಬಳಕೆಗೆ ಸಹಕರಿಸಲು ತೀರ್ಮಾನಿಸಲಾಯಿತು.
ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ, ಕುಲಸಚಿವ ಗಣೇಶ್ ಸಂಜೀವ್, ಎಸ್ಟೇಟ್ ಮ್ಯಾನೇಜರ್ ಬಸವಣ್ಣ, ಪಿಡಿಒ ರಜನಿ, ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕರು, ಸಂಯೋಜಕರಾದ ಚೇತನ್ ಕುಮಾರ್, ಶಶಿಕಾಂತ್ ಮಾಜಿ ಪಂಚಾಯತ್ ಸದಸ್ಯೆ ವೇದಾವತಿ ಉಪಸ್ಥಿತರಿದ್ದರು.
ಸ್ಥಳ ಪರಿಶೀಲನೆಯಲ್ಲಿ ಪಿ.ಎ. ಇಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕ ಸಿ.ವಿ. ಪೂಜಾರ್, ಪ್ರಯೋಗಾಲಯ ಸಹಾಯಕ ಅಬ್ದುಲ್ ಹಸೀದ್ ನಾಟೆಕಲ್ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಮದನ್, ಆರೋಗ್ಯ ನಿರೀಕ್ಷಕ, ವಿ.ವಿ.ಯ ಗಾರ್ಡನ್ ಮೇಲ್ವಿಚಾರಕ ಲಕ್ಷ್ಮಣ್, ಪತ್ರಕರ್ತ ಅನ್ಸಾರ್ ಇನ್ನೋಳಿ ಮೊದಲಾದವರಿದ್ದರು.