ಅಟೋ ರಿಕ್ಷಾಕ್ಕೆ ತೂಫಾನ್ ಢಿಕ್ಕಿ: ವೃದ್ಧೆ ಮೃತ್ಯು, ಮೂವರಿಗೆ ಗಂಭೀರ ಗಾಯ

ಅಟೋ ರಿಕ್ಷಾಕ್ಕೆ ತೂಫಾನ್ ಢಿಕ್ಕಿ: ವೃದ್ಧೆ ಮೃತ್ಯು, ಮೂವರಿಗೆ ಗಂಭೀರ ಗಾಯ

ಉಪ್ಪಿನಂಗಡಿ: ಕೋಣಾಲು ಗ್ರಾಮದ ಕೋಲ್ಪೆ ಎಂಬಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾಕ್ಕೆ ತೂಫಾನ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಗಿರಿಜಾ (74) ಎಂಬವರು ಮೃತಪಟ್ಟಿದ್ದು, ಇತರ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ತೂಫಾನ್ ವಾಹನವನ್ನು ಅದರ ಚಾಲಕ ಉಪ್ಪಿನಂಗಡಿ ಕಡೆಯಿಂದ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು, ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಆಟೋರಿಕ್ಷಾಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ.

ಅಪಘಾತಕೀಡಾದ ರಿಕ್ಷಾದಲ್ಲಿ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಮಂಗಲಪದವು ಸುರುಳಿಮೂಲೆ ಮನೆ ನಿವಾಸಿ ದೀಪಕ್ ಎಸ್. ಅವರು ಚಿಕ್ಕಪ್ಪ ಸೋಮಪ್ಪ ಮತ್ತು ಅತ್ತೆ ಗಿರಿಜಾ ಅವರೊಂದಿಗೆ ಪ್ರಯಾಣಿಸುತ್ತಿದ್ದು, ಸೋಮಪ್ಪ ಅವರ ಮಗ ತಿಲಕ್ ರಾಜ್ ಅವರು ಚಾಲಕರಾಗಿದ್ದರು. ವಿಟ್ಲದಿಂದ ಹೊರಟು ಕೋಲ್ಪೆ ಪ್ರದೇಶಕ್ಕೆ ತಲುಪಿದ ಬಳಿಕ ಪೆಟ್ರೋಲ್ ಪಂಪ್ ಬಳಿ ನೀರು ಕುಡಿಯಲೆಂದು ರಿಕ್ಷಾವನ್ನು ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದಾಗ ತೂಫಾನ್ ವಾಹನ ಢಿಕ್ಕಿ ಹೊಡೆದಿದೆ. 

ಈ ಪರಿಣಾಮ ಆಟೋರಿಕ್ಷಾ ಹೆದ್ದಾರಿ ಬದಿಯ ಚರಂಡಿಗೆ ಬಿದ್ದಿದ್ದು, ರಿಕ್ಷಾದಲ್ಲಿದ್ದ ದೀಪಕ್ ಮತ್ತು ಚಾಲಕ ತಿಲಕ್ ರಾಜ್ ಹೊರಗೆ ಎಸೆಯಲ್ಪಟ್ಟಿದ್ದಾರೆ. ಅಪಘಾತದಲ್ಲಿ ದೀಪಕ್ ಅವರಿಗೆ ಎಡಭುಜ ಹಾಗೂ ಬಲ ಕೈ ಮಣಿಕಟ್ಟಿನಲ್ಲಿ ಗಾಯಗಳಾಗಿದ್ದು, ತಿಲಕ್ ರಾಜ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸೋಮಪ್ಪ ಅವರಿಗೆ ಮೂಗು, ತಲೆಯ ಹಿಂಭಾಗ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಗಂಭೀರ ಗಾಯಗಳಾಗಿದ್ದು, ಗಿರಿಜಾ ಅವರಿಗೆ ತಲೆ, ಎದೆ ಸೇರಿದಂತೆ ದೇಹದ ಹಲವೆಡೆ ಗಂಭೀರ ಗಾಯಗಳಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದ್ದು, ತನಿಖೆ ನಡೆಯುತ್ತಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article