ಕೋಟ ಪೋಲೀಸರ ಹಿಡಿತದಿಂದ ತಪ್ಪಿಸಿಕೊಳ್ಳಲು ಆರೋಪಿಯ ಯತ್ನ: ಇನ್ನೊಂದು ಪ್ರಕರಣ ದಾಖಲು
ಕುಂದಾಪುರ: ಪ್ರಕರಣವೊಂದರ ಆರೋಪಿಯನ್ನು ಬಂಧಿಸಿ ಕರೆತರುತ್ತಿದ್ದ ಸಂದರ್ಭದಲ್ಲಿ, ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಕೆಳಗೆ ಬಿದ್ದ ಆರೋಪಿಯೊಬ್ಬ ಗಾಯಗೊಂಡ ಘಟನೆ ನಡೆದಿದೆ.
ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಐಟಿ ಆಕ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗಾಗಿ ಪಿಎಸ್ಐ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಿ ಶ್ರೀಧರ ಹಾಗೂ ಇತರ ಸಿಬ್ಬಂದಿಗಳನ್ನು ನೇಮಿಸಲಾಗಿತ್ತು.
ಖಚಿತ ಮಾಹಿತಿ ಬೆನ್ನತ್ತಿದ ಪೊಲೀಸರು, ಏಪ್ರಿಲ್ 17ರಂದು ಸಂಜೆ 5:30ರ ಸುಮಾರಿಗೆ ಮಂಗಳೂರು ಬಸ್ ನಿಲ್ದಾಣದ ಬಳಿ ಆರೋಪಿ ಸ್ವಪ್ನೀಲ್ ಸುಹಾಸ್ ಶೇಲಾರ್ (37) ಎಂಬಾತನನ್ನು ವಶಕ್ಕೆ ಪಡೆದಿದ್ದರು.
ಬಂಧಿತ ಆರೋಪಿಯನ್ನು ಖಾಸಗಿ ವಾಹನದ ಮೂಲಕ ಕೋಟ ಪೊಲೀಸ್ ಠಾಣೆಗೆ ಕರೆತರಲಾಗುತ್ತಿತ್ತು. ಸಂಜೆ ಸುಮಾರು 6:30 ಗಂಟೆಗೆ ವಾಹನವು ಠಾಣೆಯ ಸಮೀಪದ ಸರ್ವೀಸ್ ರಸ್ತೆಗೆ ತಲುಪಿ ನಿಲ್ಲಿಸಿದಾಗ, ಠಾಣೆಯನ್ನು ದೂರದಿಂದಲೇ ಕಂಡ ಆರೋಪಿ ಸ್ವಪ್ನೀಲ್, ಕಾನೂನುಬದ್ಧ ಬಂಧನದಿಂದ ತಪ್ಪಿಸಿಕೊಳ್ಳುವ ದುರುದ್ದೇಶದಿಂದ ವಾಹನದಿಂದ ಇಳಿದು ಓಡಲು ಯತ್ನಿಸಿದ್ದಾನೆ.
ಈ ವೇಳೆ ವೇಗವಾಗಿ ಓಡಿದ್ದರಿಂದ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಬಿದ್ದ ಪರಿಣಾಮ, ಆರೋಪಿಯ ಬಲಕೈ ಮೊಣಗಂಟಿನ ಭಾಗಕ್ಕೆ ಒಳಪೆಟ್ಟು ಬಿದ್ದು ಗಾಯವಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಮರಳಿ ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಕಾನೂನುಬದ್ಧ ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಸ್ವಪ್ನೀಲ್ ಸುಹಾಸ್ ಶೇಲಾರ್ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಇದೀಗ ಹೊಸದಾಗಿ ಇನ್ನೊಂದು ಪ್ರಕರಣ ದಾಖಲಿಸಲಾಗಿದೆ.