ಸಾಲದ ನೆಪದಲ್ಲಿ ಮೋಸ: ಇಬ್ಬರ ವಿರುದ್ಧ ಪ್ರಕರಣ ದಾಖಲು
ಕುಂದಾಪುರ: ಸಾಲಕ್ಕೆ ಸಾಕ್ಷಿ ಸಹಿ ಹಾಕಲೆಂದು ಕರೆಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಗಂಭೀರ ಪ್ರಕರಣವೊಂದು ಬ್ರಹ್ಮಾವರದಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ಬ್ರಹ್ಮಾವರದ ಎಸ್. ಬಾಲಕೃಷ್ಣ ಹೆಗ್ಡೆ ಮತ್ತು ಗಂಗಾಧರ ಹೆಗ್ಡೆ ನೀಡಿದ ಖಾಸಗಿ ದೂರಿನನ್ವಯ ನ್ಯಾಯಾಲಯದ ನಿರ್ದೇಶನದ ಮೇರೆಗೆ ಮೂವರು ಆರೋಪಿಗಳ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.
ಪ್ರಕರಣದ ವಿವರ:
ಹೊಸಾಳ ಗ್ರಾಮದ ಬಾರ್ಕೂರಿನಲ್ಲಿರುವ ‘ಸರ್ವೋದಯ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಲಿಮಿಟೆಡ್’ನಲ್ಲಿ ಜೆಸಿಬಿ ಯಂತ್ರ ಖರೀದಿಸಲು ಮೊದಲನೇ ಆರೋಪಿ ಎನ್. ಹರೀಶ್ ಕಾರಂತ್ ಎಂಬುವವರು ಸಾಲ ಪಡೆದಿದ್ದರು. ಈ ಸಂದರ್ಭದಲ್ಲಿ ದೂರುದಾರರಾದ ಬಾಲಕೃಷ್ಣ ಹೆಗ್ಡೆ ಹಾಗೂ ಗಂಗಾಧರ ಹೆಗ್ಡೆ ಅವರನ್ನು ಕೇವಲ ‘ಗುರುತು ಸಾಕ್ಷಿ’ಗಳಾಗಿ ಸಹಿ ಹಾಕುವಂತೆ ನಂಬಿಸಿ ಕರೆಸಲಾಗಿತ್ತು. ಆದರೆ, ಆರೋಪಿಗಳಾದ ಹರೀಶ್ ಕಾರಂತ್, ನಿತ್ಯಾನಂದ ಕಾಮತ್ ಮತ್ತು ಬಾಬು ರಾಜೇಂದ್ರ ಪ್ರಸಾದ್ ಸೇರಿಕೊಂಡು, ದೂರುದಾರರ ಸಹಿಯನ್ನು ದುರುಪಯೋಗಪಡಿಸಿಕೊಂಡು ಅವರನ್ನು ‘ಜಾಮೀನುದಾರರು’ (Guarantors) ಎಂದು ಬಿಂಬಿಸುವ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎನ್ನಲಾಗಿದೆ.
ನಕಲಿ ದಾಖಲೆ ಸೃಷ್ಟಿ ಮತ್ತು ಆಸ್ತಿ ದುರುಪಯೋಗ:
ದೂರುದಾರರ ಗಮನಕ್ಕೆ ತಾರದೆ ಅವರ ಹೆಸರಿನಲ್ಲಿ ಸಾಲದ ಹೊಣೆಗಾರಿಕೆಯನ್ನು ಸೃಷ್ಟಿಸಲಾಗಿದೆ. ಅಷ್ಟೇ ಅಲ್ಲದೆ, ಸಾಲಕ್ಕಾಗಿ ಅಡಮಾನವಿಟ್ಟಿದ್ದ ಜೆಸಿಬಿ ಕ್ರೇನ್ ಅನ್ನು ಆರೋಪಿಗಳು ಕಾನೂನುಬಾಹಿರವಾಗಿ ಮಾರಾಟ ಮಾಡಿ, ಆ ಹಣವನ್ನು ಸಾಲದ ಖಾತೆಗೆ ಜಮಾ ಮಾಡದೆ ವೈಯಕ್ತಿಕವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ. ಈ ಮೂಲಕ ಭದ್ರತಾ ಆಸ್ತಿಯನ್ನು ನಾಶಪಡಿಸಿ ಸೊಸೈಟಿಯ ಷರತ್ತುಗಳನ್ನು ಗಾಳಿಗೆ ತೂರಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಸಹಕಾರ ಸಂಘಗಳ ಜಿಲ್ಲಾ ರಿಜಿಸ್ಟ್ರಾರ್ ಮುಂದೆ ಸುಳ್ಳು ಮಾಹಿತಿ ನೀಡಿ ಏಕಪಕ್ಷೀಯ ತೀರ್ಪು ಪಡೆಯಲಾಗಿದ್ದು, ಸುಮಾರು 33,89,899 ರೂ. ವಸೂಲಾತಿಗಾಗಿ ದೂರುದಾರರ ವಿರುದ್ಧ ಎಕ್ಸಿಕ್ಯೂಶನ್ ಪ್ರಕರಣ ದಾಖಲಿಸಲಾಗಿದೆ.