ನಿಟ್ಟೆ ಶಿಕ್ಷಣ ಸಂಸ್ಥೆಯ ಅಂತರರಾಷ್ಟ್ರೀಯ ಮಾಧ್ಯಮ ಸಮಾವೇಶಕ್ಕೆ ಚಾಲನೆ
‘ಪ್ರಚಾರದಿಂದ ಶಾಂತಿಯವರೆಗೆ: ಜಾಗತಿಕ ಸಂಘರ್ಷಗಳಲ್ಲಿ ಮಾಧ್ಯಮದ ಜವಾಬ್ದಾರಿಯ ಮರುಚಿಂತನೆ’ ಎಂಬ ವಿಷಯದ ಮೇಲೆ ಈ ಸಮಾವೇಶ ಬೆಳಕು ಚೆಲ್ಲಿತು.
‘ದಿ ನ್ಯೂಸ್ ಮಿನಿಟ್’ನ ಮುಖ್ಯ ಸಂಪಾದಕಿ ಧನ್ಯಾ ರಾಜೇಂದ್ರನ್ ಅವರು ಸಮಾವೇಶವನ್ನು ಉದ್ಘಾಟಿಸಿ, ಪ್ರಸ್ತುತ ಕಾಲಘಟ್ಟದಲ್ಲಿ ಪತ್ರಿಕೋದ್ಯಮದ ನೈತಿಕ ಸವಾಲುಗಳ ಕುರಿತು ಮಾತನಾಡಿದರು. ಹೊಸ ತಲೆಮಾರಿನ ಪತ್ರಕರ್ತರು ತಂತ್ರಜ್ಞಾನವನ್ನು ಅಪಾಯಕಾರಿಯೆಂದು ತಿಳಿಯಬೇಕಾಗಿಲ್ಲ. ಕೃತಕ ಬುದ್ಧಿಮತ್ತೆಯು ಕೆಲಸವನ್ನು ಕಸಿದುಕೊಳ್ಳುತ್ತದೆ ಎಂಬ ಭಯ ಬೇಡ. ನಮ್ಮ ವೃತ್ತಿಪರತೆ, ಜನಪರತೆಯನ್ನು ಸರಿದಾರಿಯಲ್ಲಿ ಇರಿಸಿಕೊಂಡರೆ ಕೃತಕ ಬುದ್ಧಿಮತ್ತೆಯು ನಮಗೆ ಅನುಕೂಲಕಾರಿಯಾಗಿಯೂ ಕೆಲಸ ಮಾಡಬಲ್ಲದು ಎಂದು ಹೇಳಿದರು.
ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಡಾ. ಎಂ.ಎಸ್. ಮೂಡಿತ್ತಾಯ ಮಾತನಾಡಿ, ಮಾಧ್ಯಮವು ವಸ್ತುನಿಷ್ಠತೆಯನ್ನು ಅಳವಡಿಸಿಕೊಳ್ಳಬೇಕು. ಜನಪರವಾದ ವರದಿಗಾರಿಕೆಯನ್ನು ಮಾಡಬೇಕು. ಯುದ್ಧ, ಸಂಘರ್ಷಗಳನ್ನು ವರದಿ ಮಾಡುವಾಗ ಜಾಗರೂಕರಾಗಿ ಇರಬೇಕು ಎಂದು ತಿಳಿಸಿದರು.
ಅಮೆರಿಕದ ಕಾನ್ಸಾಸ್ ಸ್ಟೇಟ್ ಯೂನಿವರ್ಸಿಟಿಯ ಡಾ. ನಿಖಿಲ್ ಮೊರೊ ದಿಕ್ಸೂಚಿ ಭಾಷಣ ಮಾಡಿ, ಜಾಗತಿಕ ಪತ್ರಿಕೋದ್ಯಮವು ಕೇವಲ ದತ್ತಾಂಶಗಳನ್ನು ಆಧರಿಸಿ ಸುದ್ದಿ ಮಾಡದೇ ಮಾನವಪರ ವರದಿಗಾರಿಕೆ, ವಿಶ್ಲೇಷಣೆಗೆ ಒತ್ತು ನೀಡಬೇಕು ಎಂದು ಹೇಳಿದರು.
ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ಮುಖ್ಯಸ್ಥೆ ಡಾ. ಮೌಲ್ಯಾ ಬಾಲಾಡಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ, ಸಹ ಪ್ರಾಧ್ಯಾಪಕಿ ಸಮಾವೇಶದ ಆಶಯ ನುಡಿಗಳನ್ನಾಡಿದರು. ಸಂಶೋಧಕಿ ಅಂಜಲಿ ರೈ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿವಿಧ ಮಾಧ್ಯಮ ಗೋಷ್ಠಿಗಳು ನಡೆದವು. ನಿವೃತ್ತ ಲೆಫ್ಟಿನೆಂಟ್ ಜನರಲ್ ಎ.ಕೆ. ಭಟ್, ನ್ಯೂಸ್ ಮಿನ್ಯುಟ್ ಮುಖ್ಯ ಸಂಪಾದಕಿ ಧನ್ಯಾ ರಾಜೇಂದ್ರನ್, ಟಿವಿ ೯ ಡಿಜಿಟಲ್ ಸಂಪಾದಕ ಡಾ. ಭಾಸ್ಕರ್ ಹೆಗ್ಡೆ, ರುದ್ರಂ ಡೈನಾಮಿಕ್ಸ್ ಸಹ ನಿರ್ದೇಶಕಿ ಡಾ. ಶ್ರದ್ಧಾ ರೈ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.