ದ್ವಿಚಕ್ರ ವಾಹನಗಳ ನಡುವೆ ಅಪಘಾತ: ಸಾವು
ಮಂಗಳೂರು: ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ರವಿವಾರ ರಾತ್ರಿ 11ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿಯ ತಡಂಬೈಲು ಸುಪ್ರೀಮ್ ಹಾಲ್ ಎದುರು ನಡೆದಿದೆ.
ಮೃತರನ್ನು ಚೊಕ್ಕಬೆಟ್ಟು ೮ನೇ ಬ್ಲಾಕ್ ನಿವಾಸಿ ಮುಹಮ್ಮದ್ ಅಖ್ತರ್ ಹುಸೈನ್(25) ಎಂದು ಗುರುತಿಸಲಾಗಿದೆ. ಗಲ್ಪ್ ಉದ್ಯೋಗಿಯಾಗಿದ್ದ ಇವರು ರಜೆ ನಿಮಿತ್ತ ಶುಕ್ರವಾರ ಊರಿಗೆ ಮರಳಿದ್ದರು.
ಘಟನೆಯಲ್ಲಿ ಸಹಸವಾರನಾಗಿದ್ದ ಚೊಕ್ಕಬೆಟ್ಟು ೮ನೇ ಬ್ಲಾಕ್ ನಿವಾಸಿ ಹಾಫಿಲ್ (22), ಇನ್ನೊಂದು ದ್ವಿಚಕ್ರವಾಹನದಲ್ಲಿದ್ದ ಮಧ್ಯ ಮುಂಚೂರು ನಿವಾಸಿ ರಾಘವೇಂದ್ರ (24), ಸಹಸವಾರ ಮಧ್ಯ ಮುಂಚೂರು ನಿವಾಸಿ ಯಶವಂತ (26) ಗಂಭೀರಗಾಯಗೊಂಡಿದ್ದು, ಎಲ್ಲರನ್ನೂ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಖ್ತರ್ ಹುಸೈನ್ ನ ಪರಿಚಯಸ್ಥರಾದ ನೂರುಲ್ಲಾ ಹುಸೈನ್ ಸಾಡು ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.