ಆಟೋ ಎಲ್ಪಿಜಿ ಸಮಸ್ಯೆ ಪರಿಹಾರಕ್ಕೆ ಒತ್ತಾಯ
ಮಂಗಳೂರು: ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಆಟೋ ಎಲ್ಪಿಜಿ (ಗ್ಯಾಸ್) ಸಮಸ್ಯೆಯಿಂದ ರಿಕ್ಷಾ ಚಾಲಕರು ಸೇರಿದಂತೆ ದುಡಿಯುವ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಸರಕಾರ ಈ ಬಗ್ಗೆ ಗಮನ ಹರಿಸಿ ಕ್ರಮ ವಹಿಸಬೇಕೆಂದು ಸೋಶಿಯಲ್ ಡೆಮೊಕ್ರಾಟಿಕ್ ಟ್ರೇಡ್ ಯೂನಿಯನ್ (ಎಸ್ಡಿಟಿಯು) ಸರಕಾರವನ್ನು ಒತ್ತಾಯಿಸಿದೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಸ್ಡಿಟಿಯು ಜಿಲ್ಲಾ (ಮಂಗಳೂರು ನಗರ)ಅಧ್ಯಕ್ಷ ರಹಿಮಾನ್ ಬೋಳಿಯಾರ್, ಆಟೋ ಗ್ಯಾಸ್ ಕೊರತೆಯ ಜತೆಗೆ ಬೆಲೆ ಏರಿಕೆಯಿಂದಾಗಿ ರಿಕ್ಷಾ ಚಾಲಕರು ಮಾತ್ರವಲ್ಲದೆ ಎಲ್ಲಾ ಕ್ಷೇತ್ರದ ದುಡಿಯುವ ವರ್ಗ ತೊಂದರೆ ಅನುಭವಿಸುತ್ತಿದೆ ಎಂದರು.
ಅಧಿಕೃತ ಸುತ್ತೋಲೆಯ ಹೊರತಾಗಿಯೂ ಕೆಲವು ಗ್ಯಾಸ್ ಪಂಪ್ಗಳು ಬೇಕಾಬಿಟ್ಟಿ ಬೆಲೆ ಏರಿಕೆ ಮಾಡಿ ಚಾಲಕರಿಂದ ಸುಲಿಗೆ ಮಾಡುತ್ತಿವೆ ಎಂದು ಆರೋಪಿಸಿದ ಅವರು, ಗೃಹಬಳಕೆ ಹಾಗೂ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ ಗಳು ಕೂಡಾ ಅಧಿಕ ಬೆಲೆಗೆ ಮಾರಾಟವಾಗುತ್ತಿವೆ. ಮಧ್ಯ ಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲ ವ್ಯತ್ಯಯದಿಂದ ಉಂಟಾಗುತ್ತಿರುವ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ತೆರಿಗೆಯನ್ನು ಕಡಿತಗೊಳಿಸಿ ಬೆಲೆ ಏರಿಕೆ, ಅನಿಲ ಸಿಲಿಂಡರ್ ಸರಬರಾಜಿಗೆ ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ ಅವರು, ಗ್ಯಾಸ್ ದರ ಏರಿಕೆಯಿಂದ ಆಟೋ ರಿಕ್ಷಾ ಚಾಲಕರ ಮೇಲಾಗಿರುವ ಪರಿಣಾಮವನ್ನು ಎದುರಿಸಲು ಸರಕಾರ ಸಾಮಾಜಿಕ ಹೊಣೆಗಾರಿಯಡಿ ಪರಿಹಾರ ನೀಡಬೇಕು ಒಂದು ಹೇಳಿದರು. ಪರಿಷ್ಕೃತ ದರಕ್ಕಿಂತ ಹೆಚ್ಚಿನ ದರ ವಿತರಿಸುವ ಪಂಪ್ಗಳ ಮೇಲೆ ಕಾನೂನುಕ್ರಮ ವಹಿಸಬೇಕು. ಪೂರೈಕೆಯನ್ನು ಸರಾಗಗೊಳಿಸಬೇಕು. ದರ ಏರಿಕೆಯ ಕುರಿತಂತೆ ಸಂಬಂಧಪಟ್ಟ ಇಲಾಖೆಗಳು ಅಥವಾ ಸರಕಾರ ಅಧಿಕೃತ ಆದೇಶ ಹೊರಡಿಸಬೇಕು. ಗ್ಯಾಸ್, ಪೆಟ್ರೋಲ್, ಡೀಸೆಲ್ಗೆ ವಿಧಿಸಿರುವ ಸುಂಕ ಕಡಿತಗೊಳಿಸಬೇಕು. ಕಾಳ ಸಂತೆಯಲ್ಲಿ ಮಾರಾಟವಾಗುವ ಗ್ಯಾಸ್ಗೆ ಕಡಿವಾಣ ಹಾಕಬೇಕು ಎಂದು ಅವರು ಈ ಸಂದರ್ಭ ಒತ್ತಾಯಿಸಿದರು.
ಮಂಗಳೂರು ಗ್ರಾಮಾಂತರ ವ್ಯಾಪ್ತಿಯ ಅಧ್ಯಕ್ಷ ಸಲೀಂ ಜಿ.ಕೆ., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲೀಂ ಆಲಾಡಿ, ಜಿಲ್ಲಾ ಉಪಾಧ್ಯಕ್ಷ ಫಿಲಿಫ್ ಹೆನ್ರಿ ಡಿಸೋಜಾ, ಮುಲಿ ಘಟಕದ ಅಧ್ಯಕ್ಷರಾದ ವಿಶು ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಬೆಂಗ್ರೆ ಉಪಸ್ಥಿತರಿದ್ದರು.