ಗ್ಯಾಸ್ ಪಂಪ್ಗಳಲ್ಲಿ ಏಕರೂಪದ ದರಕ್ಕೆ ಆಗ್ರಹ: ಅಟೋ ಬಾಡಿಗೆ ಏರಿಕೆಗೆ ನಿರ್ಧಾರ
ಪುತ್ತೂರು: ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಯುದ್ಧಗಳು ನಡೆಯುತ್ತಿರುವ ಪರಿಣಾಮವಾಗಿ ಎಲ್ಪಿಜಿ ಆಟೋ ಗ್ಯಾಸ್ಗಳಲ್ಲಿ ಏರಿಕೆ ಆಗುತ್ತಿದೆ. ಒಂದೊಂದು ಪಂಪ್ಗಳಲ್ಲಿ ಒಂದೊಂದು ದರವಿದೆ. ಹೀಗೆ ದರ ಏರಿಕೆಯಾದರೆ ಬಾಡಿಗೆ ದರವನ್ನು ಏರಿಸುವುದು ಅನಿವಾರ್ಯವಾಗಬಹುದು ಎಂದು ಪುತ್ತೂರು ತಾಲೂಕು ಆಟೋ ಚಾಲಕ ಮಾಲಕರ ಸಂಯುಕ್ತ ಹೋರಾಟ ಸಮಿತಿ ಅಧ್ಯಕ್ಷ ಜಯರಾಮ ಕುಲಾಲ್ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಎಲ್ಪಿಜಿ ಹಾಗೂ ಇತರ ಪಂಪ್ಗಳಲ್ಲಿ ನಿರಂತರವಾಗಿ ದರ ಹೆಚ್ಚಳ ಮಾಡುತ್ತಿದ್ದಾರೆ. ಬೇರೆ ಬೇರೆ ಪಂಪ್ಗಳಲ್ಲಿ ಬೇರೆ ಬೇರೆ ರೀತಿಯ ದರಗಳನ್ನು ಆಟೋ ಚಾಲಕರಲ್ಲಿ ಪಡೆಯುತ್ತಿದ್ದಾರೆ. ಆರಂಭದಲ್ಲಿ 62 ರೂಪಾಯಿಯಿದ್ದ ಗ್ಯಾಸ್ಗೆ ಈಗ ಕೆಲವೊಂದು ಪಂಪ್ಗಳಲ್ಲಿ ರೂ. 105ಕ್ಕೆ ಏರಿದೆ. ಆದರೆ ನಮಗೆ ಬಾಡಿಗೆ ದರ ಏರಿಕೆ ಮಾಡಲು ಪ್ರಾದೇಶಿಕ ಸಾರಿಗೆ ಇಲಾಖೆಯ ಅನುಮತಿ ಬೇಕಾಗಿದೆ.
ಆದರೆ ಹೊಟೇಲ್ಗಳಲ್ಲಿ ಯಾವುದೇ ಮುಲಾಜಿಲ್ಲದೇ ದರ ಏರಿಕೆಯನ್ನು ಮಾಡಿದ್ದಾರೆ. ಇದರಿಂದಾಗಿ ರಿಕ್ಷಾ ಚಾಲಕರ ಬದುಕು ಸಂಕಷ್ಟಕ್ಕೆ ಈಡಾಗಿದೆ. ಹಾಗಾಗಿ ಎಲ್ಪಿಜಿ ಮತ್ತು ಇತರ ಎಲ್ಲಾ ಆಟೋ ಗ್ಯಾಸ್ ಪಂಪ್ಗಳಲ್ಲಿ ಏಕರೂಪ ದರ ನಿಗದಿಪಡಿಸಬೇಕು. ಸರ್ಕಾರ ನಿಗದಿಪಡಿಸಿದ ಆಟೋ ಗ್ಯಾಸ್ ದರವನ್ನೇ ಅಳವಡಿಸಬೇಕು. ಇದರ ಜೊತೆಗೆ ರಿಕ್ಷಾಗಳಿಗೆ ಪೆಟ್ರೋಲ್ ಹಾಕಿಯಾದರೂ ಬಾಡಿಗೆ ಮಾಡುವ ಎಂದರೆ ಹಳೆ ಎಲ್ಪಿಜಿ ಆಟೋ ರಿಕ್ಷಾಗಳಿಗೆ ಪೆಟ್ರೋಲ್ ಹಾಕಿ ಓಡಿಸಲು ಸಾಧ್ಯವಿಲ್ಲ. ನಮ್ಮ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿ ಮನವಿ ಮಾಡಿದ್ದೇವೆ. ಯಾವ ಸ್ಪಂಧನೆಯೂ ಸಿಕ್ಕಿಲ್ಲ. ಹಾಗಾಗಿ ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ಗ್ಯಾಸ್ ದರಕ್ಕೆ ಅನುಗುಣವಾಗಿ ಬಾಡಿಗೆ ದರವನ್ನು ಹೆಚ್ಚಳ ಮಾಡುತ್ತೇವೆ ಎಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಸ್ನೇಹಸಂಗಮ ಆಟೋ ರಿಕ್ಷಾ ಚಾಲಕರ ಮಾಲಕರ ಸಂಘದ ಅಧ್ಯಕ್ಷ ತಾರನಾಥ ಬನ್ನೂರು, ಇಸ್ಮಾಯಿಲ್ ಬೊಳುವಾರು, ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಕೆ, ಎಸ್ಡಿಟಿಯು ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಆಶೀಫ್ ಮುಕ್ವೆ, ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಉಪಸ್ಥಿತರಿದ್ದರು.