ಕ್ಯಾಂಪ್ಕೊ ಹಿಂದಿನ ಪ್ರಸ್ತಾವನೆಯ ಪ್ರತಿಫಲ: ಉಡುಪಿಯ ವೈಜ್ಞಾನಿಕ ಮುಕುಟಕ್ಕೆ ‘ಪ್ರೊ. ಯು.ಆರ್. ರಾವ್ ವಿಜ್ಞಾನ ಕೇಂದ್ರ’ದ ಗರಿ
ಮಂಗಳೂರು: ಕರಾವಳಿ ಭಾಗದ ಶೈಕ್ಷಣಿಕ ಹಾಗೂ ವೈಜ್ಞಾನಿಕ ಮುಕುಟಕ್ಕೆ ಹೊಸ ಗರಿಯಾಗಿ ಉಡುಪಿಯಲ್ಲಿ ಮುಂದಿನ ಆರು ತಿಂಗಳೊಳಗೆ ತಲೆ ಎತ್ತಲಿರುವ ‘ಪ್ರೊ. ಯು.ಆರ್. ರಾವ್ ಅತ್ಯಾಧುನಿಕ ವಿಜ್ಞಾನ ಕೇಂದ್ರ’ದ ನಿರ್ಮಾಣವನ್ನು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಅವರು ಅತ್ಯಂತ ಹರ್ಷದಿಂದ ಸ್ವಾಗತಿಸಿದ್ದು, ಇದು ಇಡೀ ಕರಾವಳಿ ಪ್ರದೇಶಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತದ ಹೆಮ್ಮೆಯ ಚಂದ್ರಯಾನ ಯೋಜನೆಯ ವಿಜ್ಞಾನಿಗಳನ್ನು ಗೌರವಿಸುವ ಹಾಗೂ ಬಾಹ್ಯಾಕಾಶ ವಿಜ್ಞಾನ ಸಂಶೋಧನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಉಡುಪಿ ಜಿಲ್ಲೆಯಲ್ಲಿ ‘ಇಸ್ರೋ’ ಪ್ರಯೋಗಾಲಯ ಘಟಕವನ್ನು ಸ್ಥಾಪಿಸಬೇಕೆಂದು ಕೋರಿ ಕ್ಯಾಂಪ್ಕೊ ಮಾಜಿ ಅಧ್ಯಕ್ಷ ಎ. ಕಿಶೋರ್ ಕುಮಾರ್ ಕೊಡ್ಗಿ ಅವರು 2023ರಲ್ಲಿಯೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು ಎಂದು ಸ್ಮರಿಸಿದರು.
ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿಜ್ಞಾನಿಗಳ ಗಣನೀಯ ಕೊಡುಗೆಯನ್ನು ಆ ಪ್ರಸ್ತಾವನೆಯಲ್ಲಿ ಎತ್ತಿ ತೋರಿಸಲಾಗಿತ್ತು. ಅಲ್ಲದೆ, ಉಡುಪಿ ಮೂಲದವರೇ ಆದ, ದೇಶದ ಹೆಸರಾಂತ ಬಾಹ್ಯಾಕಾಶ ವಿಜ್ಞಾನಿ ದಿ. ಪ್ರೊ. ಯು.ಆರ್. ರಾವ್ ಅವರ ಸ್ಮರಣಾರ್ಥ ಇಸ್ರೋ ಘಟಕವೊಂದರ ಅಗತ್ಯವನ್ನು ಅದರಲ್ಲಿ ಬಲವಾಗಿ ಪ್ರತಿಪಾದಿಸಲಾಗಿತ್ತು.
ಸುಮಾರು 6.2 ಕೋಟಿ ರೂ. ವೆಚ್ಚದಲ್ಲಿ ಐದು ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಹಾಗೂ ‘ಏರೋ-ಸ್ಪೇಸ್ ಗ್ಯಾಲರಿ’ಯಂತಹ ಅದ್ಭುತ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಈ ನೂತನ ವಿಜ್ಞಾನ ಕೇಂದ್ರವು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಯುವ ಸಂಶೋಧಕರಿಗೆ ವಿಜ್ಞಾನ, ನಾವೀನ್ಯತೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನದತ್ತ ಒಲವು ಮೂಡಿಸಲು ದಾರಿದೀಪವಾಗಲಿದೆ. ಭವಿಷ್ಯದಲ್ಲಿ ಕರಾವಳಿ ಭಾಗದಲ್ಲಿ ಇಂತಹ ಮತ್ತಷ್ಟು ಉನ್ನತ ಮಟ್ಟದ ವೈಜ್ಞಾನಿಕ ಸಂಸ್ಥೆಗಳು ಸ್ಥಾಪನೆಯಾಗಲಿ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಅವರು ಪ್ರಕಟಣೆಯಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ.