ಕರಾವಳಿಯಲ್ಲಿ ಬಿರುಬಿಸಿಲಿನ ನಡುವೆ ವರುಣನ ಸುಳಿವು: ಮೇ ಅಂತ್ಯಕ್ಕೆ ಮುಂಗಾರು ಆಗಮನದ ನಿರೀಕ್ಷೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ವಿಚಿತ್ರ ಹವಾಮಾನ ಕಂಡುಬರುತ್ತಿದೆ. ಮುಂಜಾನೆ ಮತ್ತು ಮಧ್ಯಾಹ್ನದ ವೇಳೆಗೆ ಸುಡುವ ಬಿಸಿಲು ಹಾಗೂ ಅತಿಯಾದ ಸೆಖೆ ಜನರನ್ನು ಹೈರಾಣಾಗಿಸುತ್ತಿದ್ದರೆ, ಮಧ್ಯಾಹ್ನದ ನಂತರ ಮೋಡಕವಿದ ವಾತಾವರಣ ನಿರ್ಮಾಣವಾಗುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಚಟುವಟಿಕೆಗಳು ಚುರುಕುಗೊಂಡಿದ್ದು, ಮುಂದಿನ 3-4 ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗುರುವಾರ ಮಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶವು 34ಡಿ.ಸೆ ದಾಖಲಾಗಿದ್ದು, ಕನಿಷ್ಠ ಉಷ್ಣಾಂಶವು 26ಡಿ.ಸೆ ನಷ್ಟಿತ್ತು. ವಾತಾವರಣದಲ್ಲಿ ತೇವಾಂಶದ ಪ್ರಮಾಣ ಹೆಚ್ಚಿರುವುದರಿಂದ ತೀವ್ರತರದ ಸೆಖೆ ಅನುಭವವಾಗಿದೆ.
ಮುಂಗಾರು ಆಗಮನದ ಹಾದಿ
ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ಮಾರುತಗಳ ತಿರುಗುವಿಕೆಯು ಶಿಥಿಲಗೊಂಡಿದ್ದು, ನೈಋತ್ಯ ಮುಂಗಾರು ಮಾರುತಗಳು ಈಗಾಗಲೇ ಅಂಡಮಾನ್ ದ್ವೀಪವನ್ನು ಪ್ರವೇಶಿಸಿವೆ. ಪ್ರಸ್ತುತ ಪರಿಸ್ಥಿತಿ ಗಮನಿಸಿದರೆ, ಸಮುದ್ರದಲ್ಲಿ ಯಾವುದೇ ಹೊಸ ವಾಯುಭಾರ ಕುಸಿತ ಉಂಟಾಗದಿದ್ದಲ್ಲಿ, ಮುಂಗಾರು ಮಾರುತಗಳು ಮೇ 20 ಮತ್ತು 25ರ ನಡುವೆ ಕೇರಳ ರಾಜ್ಯವನ್ನು ಪ್ರವೇಶಿಸುವ ಸಾಧ್ಯತೆಗಳಿವೆ. ಈ ಲೆಕ್ಕಾಚಾರದಂತೆ ಮೇ ತಿಂಗಳ ಅಂತ್ಯದ ವೇಳೆಗೆ ಕರ್ನಾಟಕದ ಕರಾವಳಿ ಭಾಗಕ್ಕೆ ಮುಂಗಾರು ಮಳೆ ಕಾಲಿಡಬಹುದು ಎಂದು ಅಂದಾಜಿಸಲಾಗಿದೆ.
ಆರಂಭಿಕ ಮುಂಗಾರು ದುರ್ಬಲ
ಭಾರತೀಯ ಹವಾಮಾನ ಇಲಾಖೆಯ ವರದಿಯ ಪ್ರಕಾರ, ಈ ವರ್ಷ ಮುಂಗಾರು ಆರಂಭದಲ್ಲಿ ಸ್ವಲ್ಪ ದುರ್ಬಲವಾಗಿರುವ ಸಾಧ್ಯತೆಗಳಿವೆ. ಜೂನ್ನಿಂದ ಸೆಪ್ಟೆಂಬರ್ವರೆಗಿನ ಒಟ್ಟು ಮಳೆಯ ಪ್ರಮಾಣವು ವಾಡಿಕೆಗಿಂತ ಸ್ವಲ್ಪ ಕಡಿಮೆ ಇರಬಹುದು ಎಂದು ಇಲಾಖೆ ತಿಳಿಸಿದೆ. ಆದಾಗ್ಯೂ, ಮಲೆನಾಡು ಹಾಗೂ ಕರಾವಳಿಯ ಕೆಲ ಭಾಗಗಳಲ್ಲಿ ಜೂನ್ ದ್ವಿತೀಯಾರ್ಧದಲ್ಲಿ ಮಳೆ ಚುರುಕಾಗುವ ನಿರೀಕ್ಷೆಯಿದೆ.
ಕರಾವಳಿ ತೀರ ನಿವಾಸಿಗಳಿಗೆ ಎಚ್ಚರಿಕೆ
ಮುಂದಿನ 1 ವಾರ ಕರಾವಳಿಯಲ್ಲಿ ಮಳೆ ಹಾಗೂ ಗುಡುಗಿನ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆಯು ಮೀನುಗಾರರಿಗೆ ಎಚ್ಚರಿಕೆಗಳನ್ನು ನೀಡಿದೆ. ಮುಂದಿನ 3-4 ದಿನಗಳು ಸಂಜೆ ಹಾಗೂ ರಾತ್ರಿಯ ಸಮಯದಲ್ಲಿ ಗುಡುಗು ಸಹಿತ ಮಳೆಯಾಗುವ ಸಂಭವವಿರುವುದರಿಂದ ಸಮುದ್ರದಲ್ಲಿರುವ ಮೀನುಗಾರರು ಎಚ್ಚರಿಕೆಯಿಂದಿರಬೇಕು. ಮಳೆಯ ಸಮಯದಲ್ಲಿ ಕರಾವಳಿ ತೀರದಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಸಮುದ್ರದ ಅಲೆಗಳ ಅಬ್ಬರ ಸಾಮಾನ್ಯಕ್ಕಿಂತ ಹೆಚ್ಚಿರಲಿದ್ದು, ಸಣ್ಣ ದೋಣಿಗಳಲ್ಲಿ ಮೀನುಗಾರಿಕೆಗೆ ತೆರಳುವವರು ತೀರಕ್ಕೆ ಹತ್ತಿರದಲ್ಲಿರಲು ಸೂಚಿಸಲಾಗಿದೆ.
ಘಾಟ್ಗಳಲ್ಲಿ ಹವಾಮಾನದಲ್ಲಿ ಭಾರಿ ಬದಲಾವಣೆ
ಪಶ್ಚಿಮಘಟ್ಟದ ಪ್ರಮುಖ ಘಾಟಿ ಪ್ರದೇಶಗಳಾದ ಆಗುಂಬೆ ಮತ್ತು ಚಾರ್ಮಾಡಿ ಘಾಟ್ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಹವಾಮಾನದಲ್ಲಿ ಭಾರಿ ಬದಲಾವಣೆ ಕಂಡುಬಂದಿದೆ. ಬುಧವಾರ ರಾತ್ರಿ ಈ ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಿದ್ದು, ಗುರುವಾರ ಮುಂಜಾನೆ ಇಡೀ ಪರಿಸರ ದಟ್ಟವಾದ ಮಂಜಿನಿಂದ ಆವೃತವಾಗಿತ್ತು. ಗುರುವಾರ ಬೆಳಿಗ್ಗೆ ಮಂಜಿನ ತೀವ್ರತೆ ಎಷ್ಟಿತ್ತೆಂದರೆ, ರಸ್ತೆಯ ಕೆಲವು ಅಡಿಗಳ ಅಂತರದ ವಸ್ತುಗಳು ಕೂಡ ಕಾಣದಂತಾಗಿತ್ತು. ಇದರಿಂದಾಗಿ ಘಾಟಿ ರಸ್ತೆಯ ತಿರುವುಗಳಲ್ಲಿ ವಾಹನ ಚಾಲನೆ ಮಾಡುವುದು ಚಾಲಕರಿಗೆ ಸವಾಲಾಗಿ ಪರಿಣಮಿಸಿತು. ಕೆಎಸ್ಆರ್ಟಿಸಿ ಬಸ್ಗಳು ಹಾಗೂ ಸರಕು ಸಾಗಣೆ ಲಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಹೆಡ್ಲೈಟ್ ಉರಿಸಿಕೊಂಡು ಅತಿ ನಿಧಾನಗತಿಯಲ್ಲಿ ಚಲಿಸುತ್ತಿದ್ದವು. ಆಗುಂಬೆ ಘಾಟಿಯ ಹದಿನೆಂಟು ತಿರುವುಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಕೆಲಕಾಲ ಸಂಚಾರ ದಟ್ಟಣೆ ಕೂಡ ಉಂಟಾಯಿತು.
ಮಳೆ ಮತ್ತು ಮಂಜಿನ ಕಾರಣದಿಂದ ರಸ್ತೆಗಳು ಜಾರಿಕೆಯಾಗಿದ್ದು, ಪ್ರಪಾತಗಳಿರುವ ಈ ಅಪಾಯಕಾರಿ ರಸ್ತೆಗಳಲ್ಲಿ ಸವಾರರು ಜಾಗರೂಕತೆಯಿಂದ ಸಂಚರಿಸುವಂತೆ ಸ್ಥಳೀಯ ಆಡಳಿತ ಮತ್ತು ಪೊಲೀಸರು ಸೂಚನೆ ನೀಡಿದ್ದಾರೆ. ಪಶ್ಚಿಮಘಟ್ಟದ ಈ ವಿಶಿಷ್ಟ ಹವಾಮಾನವು ಪ್ರವಾಸಿಗರಿಗೆ ಮುದ ನೀಡಿದ್ದರೂ, ನಿತ್ಯ ಸಂಚರಿಸುವವರಿಗೆ ಮಾತ್ರ ಆತಂಕ ತಂದೊಡ್ಡಿದೆ.