ಜೋಕಟ್ಟೆ ನಾಗರಿಕರ ಧರಣಿ ಮೂರನೇ ದಿನಕ್ಕೆ
Wednesday, May 20, 2026
ಎಮ್ಆರ್ ಪಿಎಲ್ ಸಂತ್ರಸ್ತರ ಬದುಕಿನೊಂದಿಗೆ ಚೆಲ್ಲಾಟ ಆಡುವುದನ್ನು ಸಹಿಸುವುದಿಲ್ಲ: ಅಭಯ ಚಂದ್ರ ಜೈನ್
ಮಂಗಳೂರು: ಕೋಕ್ ಸಲ್ಪರ್ ಘಟಕದಿಂದ ಗಂಭೀರ ಮಾಲಿನ್ಯ ಸಮಸ್ಯೆ ಎದುರಿಸುತ್ತಿರುವ ಜನವಸತಿ ಪ್ರದೇಶದಲ್ಲಿ ಹಸಿರು ವಲಯ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ, ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯ ಶೀಘ್ರದಲ್ಲಿ ನಡೆಸಬೇಕು ಎಂದು ಆಗ್ರಹಿಸಿ ಜೋಕಟ್ಟೆ, ಕೆಂಜಾರು, ಕಳವಾರು ಗ್ರಾಮಸ್ಥರು ಎಮ್ಆರ್ ಪಿಎಲ್ ನ ಕೋಕ್ ಸಲ್ಪರ್ ಘಟಕದ ಮುಂಭಾಗ ನಡೆಸುತ್ತಿರುವ ಹಗಲು ರಾತ್ರಿ ಧರಣಿ 3ನೇ ದಿನಕ್ಕೆ ಕಾಲಿಟ್ಟಿತು.
ಮಾಜಿ ಸಚಿವ ಅಭಯಚಂದ್ರ ಜೈನ್ 3ನೇ ದಿನದ ಧರಣಿಯಲ್ಲಿ ಪಾಲ್ಗೊಂಡು ಧರಣಿ ನಿರತರಿಗೆ ಬೆಂಬಲ ಸೂಚಿಸಿದರು. 2016 ರ ರಲ್ಲಿ ತಾನು ಸಚಿವನಾಗಿದ್ದ ಸಂದರ್ಭದಲ್ಲಿ ಕೋಕ್ ಸಲ್ಪರ್ ಮಾಲಿನ್ಯದಿಂದ ಜೋಕಟ್ಟೆಯ ಜನವಸತಿ ಪ್ರದೇಶದಲ್ಲಿ ಉಂಟಾದ ಗಂಭೀರವಾದ ಸ್ಥತಿಗೆ ಪರಿಹರಿಸಲು ಸರಕಾರ ವಿಶೇಷ ಮುತುವರ್ಜಿ ವಹಿಸಿತ್ತು. ತಜ್ಞರ ಸಮಿತಿ ರಚಿಸಿ ಪರಿಹಾರೋಪಾಯಗಳನ್ನು ಕಂಡು ಹುಡುಕಿ ಆದೇಶ ಹೊರಡಿಸಲಾಗಿತ್ತು. ಆದೇಶ ಹೊರಟು ಹತ್ತು ವರ್ಷಗಳಾದರು ಎಮ್ಆರ್ ಪಿಎಲ್ ಹಸಿರು ವಲಯ ನಿರ್ಮಿಸಲು, ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ನೆವಗಳನ್ನು ಮುಂದಿಡುತ್ತಿರುವುದು ಸರಿಯಲ್ಲ. ಜಿಲ್ಲಾಡಳಿತ ಹಾಗು ಕಂಪೆನಿ ಕೊಟ್ಟ ಮಾತಿನಂತೆ ನೇರವಾಗಿ ಭೂಸ್ವಾಧೀನ ನಡೆಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು, ಗ್ರಾಮಸ್ಥರ ಬದುಕಿನೊಂದಿಗೆ ಚೆಲ್ಲಾಟ ಆಡುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು. ಈ ಕುರಿತು ಉಸ್ತುವಾರಿ ಸಚಿವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಯತ್ನಿಸುವುದಾಗಿ ತಿಳಿಸಿದರು.
ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಬಾಳ ಗ್ರಾಪಂ ಮಾಜಿ ಅಧ್ಯಕ್ಷ ಆದಂ ಕಳವಾರು, ಜೋಕಟ್ಟೆ ಗ್ರಾಪಂ ಮಾಜಿ ಅಧ್ಯಕ್ಷ ಉಮರ್ ಫಾರೂಕ್, ಕುಂಭಾರ ಯುವ ವೇದಿಕೆಯ ಅಧ್ಯಕ್ಷ ಗಂಗಾಧರ ಬಂಜನ್, ಸಿಪಿಐಎಂ ಮುಖಂಡ ಶ್ರೀನಾಥ್ ಕುಲಾಲ್, ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷರಾದ ಕಿರಣ ಪ್ರಭ, ಕಾರ್ಯದರ್ಶಿ ಪ್ರಮೀಳಾ ಕೆ, ಸಿಲ್ವಿಯಾ ಜೋಕಟ್ಟೆ, ಪುಷ್ಪಾ ಡಿ, ಹೋರಾಟ ಸಮಿತಿಯ ಪ್ರಮುಖರಾದ ಅಬೂಬಕ್ಕರ್ ಬಾವ, ಜಾಬಿರ್ ಜೆ ಎಮ್, ಇಕ್ಬಾಲ್ ಜೋಕಟ್ಟೆ, ಹಸೈನಾರ್, ಸೀತಾರಾಮ ಆಚಾರ್ಯ, ಮನೋಜ್ ಜೋಕಟ್ಟೆ, ಮೋಹನ್ ಕುಲಾಲ್ ಜೋಕಟ್ಟೆ, ಗಣೇಶ್ ನಿರ್ಮುಂಜೆ, ಶೆರೀಫ್ ನಿರ್ಮುಂಜೆ, ಹನೀಫ್ ಜೋಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.




