ನೆಲ್ಲಿಕಾರು: ಬಿರುಗಾಳಿ-ಮಳೆಗೆ ಧರೆಗುರುಳಿದ ಮರಗಳು, 20ಕ್ಕೂ ಅಧಿಕ ವಿದ್ಯುತ್ ಕಂಬಗಳು
Saturday, May 16, 2026
ಮೂಡುಬಿದಿರೆ: ತಾಲೂಕಿನಾದ್ಯಂತ ಶನಿವಾರ ಬೀಸಿದ ಬಿರುಗಾಳಿ ಮತ್ತು ವಿಪರೀತ ಸುರಿದ ಮಳೆಗೆ ಉಡುಪಿ ಧರ್ಮಸ್ಥಳ ರಾಜ್ಯ ಹೆದ್ದಾರಿಯ ನೆಲ್ಲಿಕಾರು ಚರ್ಚ್ ಬಳಿ ಬೃಹತ್ ಮರಗಳು ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಿರುಗಾಳಿಗೆ 10ಕ್ಕೂ ಅಧಿಕ ಮರಗಳು ಧರೆಗುರುಳಿವೆ.
ಮರಗಳು ಬಿದ್ದ ರಭಸಕ್ಕೆ ಸುಮಾರು 20 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಇಡೀ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಗಾಳಿಯ ತೀವ್ರತೆಗೆ ನೆಲ್ಲಿಕಾರು ಗ್ರಾಮದ ಪದ್ಮಪ್ರಸಾದ್ ಅವರ ಮನೆಯ ಮೇಲ್ಛಾವಣಿಯ 12ಕ್ಕೂ ಹೆಚ್ಚು ಶೀಟ್ಗಳು ಹಾರಿಹೋಗಿ ಮನೆಗೆ ಹಾನಿಯಾಗಿದೆ. ತೋಟದ ಕೃಷಿಗೂ ಭಾರಿ ನಷ್ಟ ಸಂಭವಿಸಿದೆ. ಸ್ಥಳೀಯರು ಮತ್ತು ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿ ರಸ್ತೆಗೆ ಬಿದ್ದ ಮರಗಳನ್ನು ತೆರವುಗೊಳಿಸಲು ಶ್ರಮಿಸುತ್ತಿದ್ದಾರೆ.
ಪುರಸಭಾ ವ್ಯಾಪ್ತಿಯ ಮಾರೂರಿನಲ್ಲಿ ಬೀಸಿದ ಗಾಳಿಗೆ 5ಸೆಂಟ್ಸ್ ಕಾಲನಿಯ ಕುಸುಮ ಅವರ ಮನೆಯ ಮಾಡಿನ ಸಿಮೆಂಟ್ ಶೀಟ್ ಹಾರಿದೆ. ಕಲ್ಲಬೆಟ್ಟು- ಕರಿಂಜೆ-ಬಂಗಾಲಪದವಿನಲ್ಲಿ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ವಿದ್ಯುತ್ ಸಂಪಕ೯ ಕಡಿತಗೊಂಡಿವೆ.
ಮೆಸ್ಕಾಂ ಅಧಿಕಾರಿಗಳು, ಲೈನ್ ಮೆನ್ ನವರು ಮಳೆ, ಗಾಳಿಯನ್ನು ಲೆಕ್ಕಿಸದೆ ವಿದ್ಯುತ್ ಸಂಪಕ೯ ಕಲ್ಪಿಸಲು ಶ್ರಮಿಸುತ್ತಿದ್ದಾರೆ.
ಪುರಸಭೆಯ ಮಾಜಿ ಸದಸ್ಯ ಜೊಸ್ಸಿ ಮಿನೇಜಸ್ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.


