ಪಡುಕೊಣಾಜೆಯಲ್ಲಿ ಸಮವಸರಣ ಸಾಹಿತ್ಯ ವೇದಿಕೆ ಉದ್ಘಾಟನೆ: 'ಹೇ ರಾಮ್' ಕವನ ಸಂಕಲನ ಬಿಡುಗಡೆ

ಪಡುಕೊಣಾಜೆಯಲ್ಲಿ ಸಮವಸರಣ ಸಾಹಿತ್ಯ ವೇದಿಕೆ ಉದ್ಘಾಟನೆ: 'ಹೇ ರಾಮ್' ಕವನ ಸಂಕಲನ ಬಿಡುಗಡೆ


ಮೂಡುಬಿದಿರೆ: ಸಾಹಿತಿಗಳಾದ ಟಿಎನ್ ಖಂಡಿಗೆ-ಕವಿತಾ ಕೂಡ್ಲು ದಂಪತಿಯ ಪಡುಕೊಣಾಜೆಯಲ್ಲಿರುವ 'ಕೇವಲ ಮನೆ'ಯಲ್ಲಿ ಸಮವಸರಣ ಸಾಹಿತ್ಯ ವೇದಿಕೆ ಉದ್ಘಾಟನೆ ಮತ್ತು ಹಿರಿಯ ಸಾಹಿತಿ ನಾ.ಮೊಗಸಾಲೆ ಅವರು ಬರೆದ 'ಹೇ ರಾಮ್' ಕವನ ಸಂಕಲನ ಬಿಡುಗಡೆಗೊಳಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಲೇಖಕ ಬಿ.ಪಿ ಸಂಪತ್ ಕುಮಾರ್ ಸಮವಸರಣ ಸಾಹಿತ್ಯ ವೇದಿಕೆಯನ್ನು ಉದ್ಘಾಟಿಸಿದರು.

ಸಾಹಿತಿ ನಾ.ಮೊಗಸಾಲೆ ಮಾತನಾಡಿ ಕನ್ನಡ ಸಾಹಿತ್ಯ ಈಗ ಎಡ ಮತ್ತು ಬಲದಲ್ಲಿ ಸಿಲುಕಿ ಉಸಿರು ಕಟ್ಟಿದ ಸ್ಥಿತಿಯಲ್ಲಿದೆ. ಈ ನಡುವೆ ಕಾವ್ಯದ ಘನತೆ ಕುಂದುತ್ತಿದೆ. ಕಾವ್ಯದ ಜೊತೆ ಸಂವಾದ ಮತ್ತು ಸಂವಹನ ಇಲ್ಲದಾಗುತ್ತಿದೆ. ಪಿಎಚ್‌ಡಿ ಪ್ರಬಂಧಕ್ಕೆ ಮತ್ತು ಸಾಹಿತ್ಯ ವಿದ್ಯಾರ್ಥಿಗಳ ಕಲಿಕೆಗೆ ಮಾತ್ರ ಕವಿತೆ ಸೀಮಿತ ಎಂಬಂತಾಗಿದೆ ಎಂದರು. ಬದುಕು ಅನೇಕ ಪಾಠಗಳನ್ನು ಕಲಿಸಿದ್ದು, ಅನುಭವದ ಆಧಾರದಲ್ಲಿ ಅದನ್ನೆಲ್ಲ ದಾಖಲಿಸುವ ಯೋಜನೆ ಹಾಕಿಕೊಂಡಿರುವುದಾಗಿ ತಿಳಿಸಿದರು.

ಸಂಕಲನದ 7 ಕವನಗಳನ್ನು ಸಾಹಿತಿಗಳು, ಅಧ್ಯಾಪಕರು ಮತ್ತು ಸಾಹಿತ್ಯ ವಿದ್ಯಾರ್ಥಿಗಳು ಓದಿ ಕವಿತೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಡಿ.ವಿ ಪ್ರಕಾಶ್, ಸುಧಾರಾಣಿ, ಹರೀಶ್ ಟಿ.ಜಿ, ರವಿಶಂಕರ್ ಜಿ.ಕೆ, ಅಮೃತಾ, ಅಭ್ಯುದಯ ಮತ್ತು ಕವಿತಾ ಕೂಡ್ಲು ಕವನ ವಾಚಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಮೂಡುಬಿದಿರೆ ಘಟಕದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಮಾತನಾಡಿದರು.ಪ್ರಾಂಶುಪಾಲ, ಲೇಖಕ ಜನಾರ್ದನ ಭಟ್  ಉಪಸ್ಥಿತರಿದ್ದರು. 

ಸಮವಸರಣ ಸಾಹಿತ್ಯ ವೇದಿಕೆಯ ಸ್ಥಾಪಕರಾದ ಟಿ.ಎನ್ ಖಂಡಿಗೆ ಸ್ವಾಗತಿಸಿದರು. ಯೋಗೀಶ್ ಕೈರೋಡಿ ನಿರೂಪಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article