ಕಲ್ಲಬೆಟ್ಟು ಶಾಲೆಯಲ್ಲಿ ದಾಖಲಾತಿ ಆಂದೋಲನ: ಜಾಥಾ
Wednesday, May 20, 2026
ಮೂಡುಬಿದಿರೆ: 2026-27 ನೇ ಸಾಲಿನ ಶಾಲಾ ದಾಖಲಾತಿ ಆಂದೋಲನವು ಪಿ.ಎಂ.ಶ್ರೀ.ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕಲ್ಲಬೆಟ್ಟು ಇಲ್ಲಿ ಮಂಗಳವಾರ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ವಿರುಪಾಕ್ಷ ಎಚ್.ಎಸ್ ಅವರು ಆಂದೋಲನಕ್ಕೆ ಚಾಲನೆಯನ್ನು ನೀಡಿ ಮಾತನಾಡಿ ಮೂಡುಬಿದಿರೆ ವ್ಯಾಪ್ತಿಯಲ್ಲಿ ಎರಡು ಪಿ.ಎಂ.ಶ್ರೀ. ಶಾಲೆಗಳು ಇದ್ದು. ಕೇಂದ್ರ ಸರಕಾರದ ಸಂಯೋಜನೆಯಲ್ಲಿ ಅನೇಕ ಸವಲತ್ತುಗಳನ್ನು ಪಡೆದುಕೊಳ್ಳುವುದರೊಂದಿಗೆ. ಅವುಗಳ ಪ್ರಯೋಜನವು ಎಲ್ಲಾ ವಿದ್ಯಾರ್ಥಿಗಳಿಗೆ ಸಿಗುತ್ತಿದೆ. 2026-27 ನೇ ಸಾಲಿನಿಂದ ಸರಕಾರಿ ಶಾಲೆಗಳಲ್ಲಿ ದ್ವಿ-ಭಾಷೆಗಳಲ್ಲಿ ಭೋದನೆ ನಡೆಯುತ್ತದೆ. ಎಲ್ಲಾ ಪೋಷಕರು ನಿಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಿ ಹೆಚ್ಚು ಪ್ರಯೋಜನವನ್ನು ಪಡೆಯಬೇಕು ಎಂದು ಕರೆ ನೀಡಿದರು.
ಕಲ್ಲಬೆಟ್ಟು ವ್ಯಾಪ್ತಿಯ ಸುತ್ತ ಶಾಲಾ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗುತ್ತಾ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಪ್ರೇರೆಪಿಸಿದರು. ಶಿಕ್ಷಣ ಸಂಯೋಜಕಿ ಸ್ಮಿತಾ ಮಿರಾಂದ, ಶಾಲಾಭಿವೃದ್ದಿ ಸಮಿತಿಯ ಸದಸ್ಯರು, ಶಾಲಾ ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು. ಮುಖ್ಯ ಶಿಕ್ಷಕಿ ಜೆಸಿಂತಾ ಅವರು ಸ್ವಾಗತಿಸಿದರು. ಅನಿತಾ ಸಿಕ್ವೇರಾ ವಂದಿಸಿದರು.
