ಫಿಲೋಮಿನಾದಲ್ಲಿ ‘ಯಕ್ಷಾಮೃತ’ ಪ್ರಮಾಣ ಪತ್ರ ವಿತರಣೆ
Sunday, May 24, 2026
ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಪುತ್ತೂರು, ಯಕ್ಷಕಲಾ ಕೇಂದ್ರ ಮತ್ತು ದೇಶಭಕ್ತ ಎನ್.ಎಸ್. ಕಿಲ್ಲೆ ಪ್ರತಿಷ್ಠಾನ ಕೆದಂಬಾಡಿ, ಸಹಯೋಗದಲ್ಲಿ ‘ಯಕ್ಷಾಮೃತ’ 2025-26 ಯಕ್ಷಗಾನ ಪ್ರದರ್ಶನ ಕಲೆಯ ಸರ್ಟಿಫಿಕೇಟ್ ಕೋರ್ಸ್ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಪ್ರದಾನ ಕಾರ್ಯಕ್ರಮ ಕಾಲೇಜಿನ ಸ್ವಂದನ ಸಭಾಂಗಣದಲ್ಲಿ ಸಂಪನ್ನಗೊಂಡಿತು.
30 ವಿದ್ಯಾರ್ಥಿಗಳು ಯಕ್ಷಗಾನದ ನೃತ್ಯ, ಅರ್ಥಗಾರಿಕೆ ಮತ್ತು ಪ್ರದರ್ಶನ ವಿಭಾಗದಲ್ಲಿ, 40 ಗಂಟೆಗಳ ಉಚಿತ ತರಬೇತಿಯನ್ನು ಪಡೆದು ಪ್ರಾಯೋಗಿಕ ಮತ್ತು ಲಿಖಿತ ಪರೀಕ್ಷೆಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲ ರೆ. ಡಾ. ಆಂಟೋನಿ ಪ್ರಕಾಶ್ ಮೊಂತೇರೊ ಅವರು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ, ಮಾತನಾಡಿ, ಯಕ್ಷಗಾನ ಕಲೆ ಮತ್ತು ಇತರ ಶಾಸ್ತ್ರೀಯ ಕಲೆಗಳಲ್ಲಿ ತೊಡಗಿಸಿಕೊಂಡರೆ ಶಿಸ್ತು ಮತ್ತು ಆದರ್ಶ ಗುಣಗಳು ಮೈಗೂಡಲು ಸಾಧ್ಯ, ಯಕ್ಷಗಾನವು ವಿಶ್ವ ಮಾನ್ಯ ಕಲೆಯಾಗಿದ್ದು, ಪ್ರಾಮಾಣಿಕವಾಗಿ ಪ್ರಚಾರ ಬಯಸದೆ ಯಕ್ಷಾಮೃತವನ್ನು ನಿರ್ವಹಿಸುತ್ತೇವೆ ಮತ್ತು ಇದರ ಪ್ರಯೋಜನವನ್ನು ಪಡೆಯುವಂತೆ ವಿನಂತಿಸಿದರು.
ಯಕ್ಷ ಕಲಾ ಕೇಂದ್ರ ನಿರ್ದೇಶಕ ಪ್ರಶಾಂತ್ ರೈ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಯಕ್ಷಾಮೃತ ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನದೊಂದಿಗೆ ಸರ್ವಾಂಗೀಣ ಬೆಳವಣಿಗೆಯನ್ನು ಹೊಂದಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ ಎಂದರು.
ಮುಂದಿನ ಶೈಕ್ಷಣಿಕ ವರ್ಷದಲ್ಲಿ ಚೆಂಡೆ ಮೇಳ ತರಗತಿಯೂ ಪ್ರಾರಂಭವಾಗಲಿದ್ದು ಹೆಚ್ಚಿನ ವಿದ್ಯಾರ್ಥಿಗಳು ಸೇರ್ಪಡೆಗೊಳ್ಳುವಂತೆ ವಿನಂತಿಸಿದರು.
ಶ್ರದ್ದಾ ಭಟ್ ಪ್ರಾರ್ಥಿಸಿ, ಯಕ್ಷಾಮೃತ ಸಂಯೋಜಕಿ ಸುರಕ್ಷಾ ರೈ ವಂದಿಸಿದರು.

