ಸಹಜ ಸಾಮರ್ಥ್ಯದ ಉದ್ದೀಪನ ಶಿಕ್ಷಣದ ಉದ್ದೇಶ: ರಾಜೇಂದ್ರ ಭಟ್ ಕೆ.
Friday, June 26, 2026
ಕಾರ್ಕಳ: ವಿದ್ಯಾರ್ಥಿಗಳಲ್ಲಿ ಸಹಜವಾದ ಸಾಮರ್ಥ್ಯಗಳ ಉದ್ದೀಪನವೆ ಶಿಕ್ಷಣದ ಮೂಲ ಉದ್ದೇಶವಾಗಿದೆ. ವಿವಿಧ ತರಬೇತುಗಳಿಂದ ಅವರ ಸಾಮರ್ಥ್ಯಗಳನ್ನು ಗುರುತಿಸಿ ಅವುಗಳನ್ನು ನಿಕಷಕ್ಕೆ ಒಡ್ಡಿ ಅವರ ಸಾಮರ್ಥ್ಯ ಮತ್ತು ಕೌಶಲಗಳನ್ನು ಹರಿತ ಮಾಡಲು ಸಾಧ್ಯವಾದರೆ ಶಿಕ್ಷಣವು ಸಾರ್ಥಕತೆ ಪಡೆಯುತ್ತದೆ ಎಂದು ರಾಷ್ಟ್ರಮಟ್ಟದ ವಿಕಸನ ತರಬೇತುದಾರರು ಮತ್ತು ಶಿಕ್ಷಕರಾದ ರಾಜೇಂದ್ರ ಭಟ್ ಕೆ. ಅವರು ಹೇಳಿದರು.
ಅವರು ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಸಪ್ತಗಿರಿ ವೇದಿಕೆಯಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಕ್ರಿಯೇಟಿವ್ ಸ್ಪೂರ್ತಿ ಮಾತು ಮಾಲಿಕೆಯ 15ನೆಯ ಸಂಚಿಕೆಯಲ್ಲಿ ಅವರು ಮಾತಾಡುತ್ತಿದ್ದರು. ವಿದ್ಯಾರ್ಥಿಗಳು ಸತತವಾದ ಅಧ್ಯಯನ ಶೀಲತೆ, ಸಮಯ ಬದ್ಧತೆ, ಸ್ವಯಂ ಶಿಸ್ತು, ನಿರಂತರ ಪರಿಶ್ರಮಗಳಿಂದ ಯಾವ ಎತ್ತರವನ್ನೂ ತಲುಪಬಹುದು ಎಂದು ಚಟುವಟಿಕೆ ಮತ್ತು ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡಿದ ಕ್ರಿಯೇಟಿವ್ ಕಾಲೇಜಿನ ಸಹ ಸಂಸ್ಥಾಪಕ ಡಾ. ಗಣನಾಥ ಶೆಟ್ಟಿ ಅವರು ಶಿಕ್ಷಣದ ಉದ್ದೇಶ ಕೇವಲ ಪರೀಕ್ಷೆಗೆ ಸಿದ್ಧಪಡಿಸುವುದು ಅಲ್ಲ. ಅದು ಬದುಕನ್ನು ಕಟ್ಟಿಕೊಡಬೇಕು ಎಂಬ ನಂಬಿಕೆಯ ಮೇಲೆ ನಮ್ಮ ಕಾಲೇಜನ್ನು ಕಟ್ಟಲಾಗಿದ್ದು ಆ ನಂಬಿಕೆಯ ಮೇಲೆ ಸ್ಪೂರ್ತಿ ಮಾತು ಮಾಲಿಕೆಯನ್ನು ರೂಪಿಸಲಾಗಿದೆ ಎಂದರು.
ಕನ್ನಡ ಉಪನ್ಯಾಸಕ ಲಕ್ಷ್ಮೀಕಾಂತ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಮಾಡಿ ವಂದಿಸಿದರು. ಕಾಲೇಜಿನ ಪ್ರಥಮ ಪಿಯುಸಿಯ ಎಲ್ಲ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು.
