ಸಂಕದಗುಂಡಿ ಹೊಳೆಯಲ್ಲಿ ಪ್ರವಾಸಿಗರ ತಂಡದ ಯುವಕ ನೀರುಪಾಲು
ಕುಂದಾಪುರ: ಹಾವೇರಿ ಮೂಲದ, ಪ್ರಸ್ತುತ ಗುಜರಾತ್ ನಿವಾಸಿಯಾದ ವಿದ್ಯಾರ್ಥಿಯೋರ್ವ ಬೈಂದೂರು ಸಮೀಪದ ಸಂಕದಗುಂಡಿ ಹೊಳೆಯಲ್ಲಿ ನೀರುಪಾಲಾದ ಹೃದಯ ವಿದ್ರಾವಕ ಘಟನೆ ಸೋಮವಾರ ನಡೆದಿದೆ.
ಮೃತ ಬಾಲಕನನ್ನು ಆಯುಷ್ (16) ಎಂದು ಗುರುತಿಸಲಾಗಿದೆ.
ಹಾವೇರಿ ಮೂಲದ ಈತನ ಕುಟುಂಬ ಗುಜರಾತ್ ನಲ್ಲಿ ನೆಲೆಸಿತ್ತು. ಆಯುಷ್ ತಂದೆ ಗುಜರಾತ್ನಲ್ಲಿ ವ್ಯವಹಾರ ನಡೆಸುತ್ತಿದ್ದರು. ಆಯುಷ್ನ ತಾಯಿ ಮತ್ತೋರ್ವ ಸಹೋದರ ಸೇರಿ ಒಟ್ಟು ಏಳು ಮಂದಿ ಮುರುಡೇಶ್ವರ, ಕನ್ಯಾಕುಮಾರಿ ಇತ್ಯಾದಿ ಕ್ಷೇತ್ರಗಳಿಗೆ ಪ್ರವಾಸ ಹೊರಟಿದ್ದರು.
ಸೋಮವಾರ ಮುರುಡೇಶ್ವರ ದರ್ಶನ ಮುಗಿಸಿಕೊಂಡು ಕುಂದಾಪುರದೆಡೆಗೆ ಬರುತ್ತಿದ್ದರು. ಮಾರ್ಗ ಮಧ್ಯೆ ಸಂಕದಗುಂಡಿ ಹೊಳೆ ದಡದಲ್ಲಿ ವಿಶ್ರಾಂತಿಗಾಗಿ ವಾಹನ ನಿಲ್ಲಿಸಿದ್ದರು. ತಂಡದವರು ಅಡಿಗೆಯ ತಯಾರಿಯಲ್ಲಿದ್ದಾಗ ಆಯುಷ್ ಮತ್ತೊಬ್ಬನ ಜೊತೆ ಸಮೀಪದ ಸಂಕದಗುಂಡಿ ಹೊಳೆಗೆ ಸ್ನಾನಕ್ಕೆ ತೆರಳಿದ್ದ. ಹೊಳೆಯ ಆಳದ ಅರಿವಿರದ ಇವರು ನೀರಿನಲ್ಲಿ ಆಯತಪ್ಪಿ ಬಿದ್ದರು. ಆಯುಷ್ಗೆ ಮೇಲೇಳಲಾಗದೆ ನೀರುಪಾಲಾದ. ಇನ್ನೋರ್ವ ಬಚಾವಾಗಿದ್ದಾನೆ.
ಸುದ್ದಿ ತಿಳಿದು ಕುಟುಂಬದವರು ಧಾವಿಸಿ ಬಂದು ಯತ್ನಿಸಿದರೂ ರಕ್ಷಣೆ ಸಾಧ್ಯವಾಗಲಿಲ್ಲ. ಅಗ್ನಿಶಾಮಕ ದಳದವರು ಮತ್ತು ಸ್ಥಳೀಯರು ಒಂದು ಗಂಟೆ ಕಾರ್ಯಾಚರಣೆ ನಡೆಸಿ ಆಯುಷ್ ಮೃತ ದೇಹವನ್ನು ಮೇಲೆತ್ತಿದ್ದಾರೆ. ಸಡಗರದಿಂದ ಶುರುವಾದ ಕುಟುಂಬದವರ ಪ್ರವಾಸ ಶೋಕದಿಂದ ಮೊಟಕುಗೊಂಡಿದೆ.