ಕಾಂಗ್ರೆಸ್ ಸರ್ಕಾರದಿಂದ ಗ್ಯಾರಂಟಿ ಫಲಾನುಭವಿಗಳಿಗೆ ವಂಚಿಸುವ ಹುನ್ನಾರ: ಸತೀಶ್ ಕುಂಪಲ
ಮಂಗಳೂರು: ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಚುನಾವಣಾ ಸಂಧರ್ಭದಲ್ಲಿ ಉಚಿತ, ಖಚಿತ, ನಿಶ್ಚಿತ ಎಂದು ಘಂಟಾಘೋಷವಾಗಿ ಹೇಳಿ ಜನಗಳಿಗೆ ಭರವಸೆ ಮೂಡಿಸಿ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಿದ್ದಾರೆ. ಈಗ ಮುಖ್ಯಮಂತ್ರಿ ಬದಲಾವಣೆ ಆದ ತಕ್ಷಣ ಗೃಹಲಕ್ಷ್ಮೀ ಮತ್ತು ಗೃಹಜ್ಯೋತಿ ಗ್ಯಾರಂಟಿಗಳಿಗೆ ಮರು ಅರ್ಜಿ ಸಲ್ಲಿಸಲು ಹೇಳುತ್ತಿರುವುದು ಗ್ಯಾರಂಟಿ ಫಲಾನುಭವಿಗಳಿಗೆ ಮಾಡುತ್ತಿರುವ ಮೋಸವಾಗಿದೆ ಎಂದು ದಕ್ಷಿಣ ಕನ್ನಡ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಸರ್ಕಾರ ಯೋಜನೆಯ ಅನುಷ್ಠಾನಕ್ಕೆಂದು ಸಮಿತಿಯನ್ನು ರಚಿಸಿ ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಿಸಿದೆ. ಇದೀಗ ಪರಿಶೀಲನೆಗಾಗಿ ಮರು ಅರ್ಜಿ ಸಲ್ಲಿಸುವುದಾದರೆ ಅನುಷ್ಠಾನ ಸಮಿತಿ ರಚಿಸಲು ಔಚಿತ್ಯವೇನಿತ್ತು?. ಸಿದ್ದರಾಮಯ್ಯ ರವರು ನೇಮಿಸಿರುವ ಸಮಿತಿಯ ಮೇಲೆ ಡಿಕೆಶಿ ಅವರಿಗೆ ವಿಶ್ವಾಸವಿಲ್ಲವೇ? ಅಥವಾ ಇದು ಜನರ ತೆರಿಗೆ ಹಣವನ್ನು ಲೂಟಿ ಮಾಡಲು ಹೂಡಿದ ಹುನ್ನಾರವಾಗಿದೆ. ಎಲ್ಲರಿಗೂ ಉಚಿತ ಎಂದವರು ಈಗ ವಿವಿಧ ಕಾರಣ ನೀಡಿ ಫಲಾನುಭವಿಗಳಿಗೆಗಳನ್ನು ಕಡಿತಗೊಳಿಸುವುದನ್ನು ಬಿ.ಜೆ.ಪಿ. ವಿರೋಧಿಸುತ್ತದೆ. ಸರ್ಕಾರ ತನ್ನ ನುಡಿಯಂತೆ ನಡೆಯಬೇಕು ಎಂದು ಕುಂಪಲ ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.