ಸಂತ ಫಿಲೋಮಿನಾ ಕಾಲೇಜಿನಲ್ಲಿ ಸೈಬರ್ ಸೆಕ್ಯುರಿಟಿ ಹಾಗೂ ಡಿಜಿಟಲ್ ಫೊರೆನ್ಸಿಕ್ಸ್ ಕಾರ್ಯಗಾರ
Tuesday, June 2, 2026
ಪುತ್ತೂರು: ಇಲ್ಲಿನ ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗ ಹಾಗೂ ಬೆಂಗಳೂರಿನ ಖ್ಯಾತ ಸೈಬರ್ ಸೆಕ್ಯುರಿಟಿ ಸಂಸ್ಥೆ ಟಾಲ್ಫೋರ್ಗಳ ಜಂಟಿ ಆಯೋಜನೆಯಲ್ಲಿ ಎಂಸಿಎ ವಿದ್ಯಾರ್ಥಿಗಳಿಗಾಗಿ 30 ಗಂಟೆಗಳ (4 ದಿನಗಳ) ಸೈಬರ್ ಸೆಕ್ಯುರಿಟಿ ಹಾಗೂ ಡಿಜಿಟಲ್ ಫೊರೆನ್ಸಿಕ್ಸ್ ಕಾರ್ಯಗಾರ ನಡೆಯಿತು.
ಕಾರ್ಯಗಾರವನ್ನು ಕಾಲೇಜಿನ ಸ್ನಾತಕೋತ್ತರ ಸಭಾಭವನದಲ್ಲಿ ದೀಪ ಬೆಳಗಿಸಿ ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಉಪ ಪ್ರಾಂಶುಪಾಲ ಡಾ. ವಿಜಯಕುಮಾರ್ ಎಂ. ಅವರು ‘ತಂತ್ರಜ್ಞಾನವು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಆದ್ದರಿಂದ, ಆನ್ಲೈನ್ ಸುರಕ್ಷತೆ ಕುರಿತು ಅರಿವು ತಾಂತ್ರಿಕ ಪರಿಣಿತರಿಗಷ್ಟೇ ಅಲ್ಲ, ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಸೈಬರ್ ದಾಳಿಗಳು, ಮಾಹಿತಿಯ ದುರುಪಯೋಗ, ಆನ್ಲೈನ್ ವಂಚನೆಗಳು ಹಾಗೂ ಗೌಪ್ಯತೆ ಸಂಬಂಧಿತ ಸಮಸ್ಯೆಗಳು ಇಂದಿನ ಸಮಾಜ ಎದುರಿಸುತ್ತಿರುವ ಪ್ರಮುಖ ಸವಾಲುಗಳಾಗಿವೆ. ಇಂತಹ ಕಾರ್ಯಾಗಾರಗಳು ಡಿಜಿಟಲ್ ಜಗತ್ತಿನಲ್ಲಿ ಜವಾಬ್ದಾರಿಯುತ ನಡೆ ಮತ್ತು ವೈಯಕ್ತಿಕ ಹಾಗೂ ವೃತ್ತಿಪರ ಮಾಹಿತಿಯನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವ ಅಗತ್ಯತೆಯನ್ನು ತಿಳಿಸಿಕೊಡುತ್ತವೆ ಎಂದು ಹೇಳಿ ಕಾರ್ಯಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಟಾಲ್ಫೋರ್ನ ಮುಖ್ಯಸ್ಥರೂ ಸೈಬರ್ ಸಕ್ಯುರಿಟಿ ಸಲಹೆಗಾರರೂ ಆದ ಡಾ. ಅಬ್ದುಲ್ ಶರೀಫ್ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಹೊಸ ತಂತ್ರಜ್ಞಾನಗಳನ್ನು ಕಲಿಯುವುದು ಕಾಲದ ಅಗತ್ಯವಾಗಿದೆ. ವಿಶೇಷವಾಗಿ ಸೈಬರ್ ಭದ್ರತೆ ಮತ್ತು ಡಿಜಿಟಲ್ ಫರೆನ್ಸಿಕ್ಸ್ ಕ್ಷೇತ್ರಗಳು ಭವಿಷ್ಯದಲ್ಲಿ ಹೆಚ್ಚಿನ ಅವಕಾಶಗಳನ್ನು ಹೊಂದಿರುವ ಮಹತ್ವದ ಕ್ಷೇತ್ರಗಳಾಗಿವೆ. ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವಂತೆ, ಸೈಬರ್ ಅಪಾಯಗಳೂ ಹೆಚ್ಚುತ್ತಿವೆ. ಆದ್ದರಿಂದ ಜ್ಞಾನ, ಜಾಗೃತಿ ಮತ್ತು ಜವಾಬ್ದಾರಿಯುತ ಬಳಕೆ ಅತ್ಯಂತ ಮುಖ್ಯವಾಗಿದೆ. ಜೀವನದಲ್ಲಿ ಯಶಸ್ಸು ಪಡೆಯಲು ಭಾವನಾತ್ಮಕ ಬುದ್ಧಿಮತ್ತೆ, ಮಾನವೀಯ ಮೌಲ್ಯಗಳು ಮತ್ತು ಒತ್ತಡವನ್ನು ಸಮತೋಲನದಿಂದ ನಿಭಾಯಿಸುವ ಸಾಮರ್ಥ್ಯವೂ ಅಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ಐಟಿ ವೃತ್ತಿಪರರು ಕೆಲಸದ ಒತ್ತಡ, ಮಾನಸಿಕ ದಣಿವು ಮತ್ತು ಜೀವನ ಸಮತೋಲನದ ಕೊರತೆಯಿಂದ ಉದ್ಯೋಗ ತೊರೆಯುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಆದ್ದರಿಂದ ಕೌಶಲ್ಯಗಳ ಜೊತೆಗೆ ಉತ್ತಮ ಮನೋಭಾವ ಮತ್ತು ಮೌಲ್ಯಾಧಾರಿತ ಜೀವನವೂ ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರಥಮ ಎಂಸಿಎ ತರಗತಿಯ ಅನನ್ಯಾ ಮತ್ತು ಬಳಗ ಪ್ರಾರ್ಥಿಸಿದರು. ಈ ಕಾರ್ಯಾಗಾರವು ವಿದ್ಯಾರ್ಥಿಗಳಿಗೆ ತಾಂತ್ರಿಕ ಜ್ಞಾನ ಮಾತ್ರವಲ್ಲದೆ, ಜವಾಬ್ದಾರಿಯುತ ಡಿಜಿಟಲ್ ನಾಗರಿಕರಾಗುವ ದಾರಿಯನ್ನೂ ತೋರಿಸಲಿ ಎಂದು ಆಶಿಸುತ್ತೇನೆ. ಕಾಲೇಜಿನ ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಡೀನ್ ಡಾ. ವಿನಯಚದ್ರ ಸ್ವಾಗತಿಸಿ ಪ್ರಾಸ್ತವಿಕ ಮಾತುಗಳನ್ನಾಡಿದರು.
ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅಕ್ಷತಾ ಬಿ ವಂದಿಸಿದರು. ಪ್ರಥಮ ಎಂಸಿಎ ವಿದ್ಯಾರ್ಥಿನಿ ಪ್ರೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಎಂಸಿಎ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ನೀಲಮ್ ಕುಟ್ಟಪ್ಪ ಹಾಗೂ ಶೋಧನ್ ಪಿ.ಜಿ. ಸಹಕಾರ ನೀಡಿದರು. ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳು ಸೈಬರ್ ಭದ್ರತೆ ಮತ್ತು ಡಿಜಿಟಲ್ ಫೊರೆನ್ಸಿಕ್ಸ್ ಕ್ಷೇತ್ರಗಳಲ್ಲಿ ಬಳಸಲಾಗುವ ಹೊಸ ಸಾಧನಗಳು ಮತ್ತು ಆಧುನಿಕ ತಂತ್ರಜ್ಞಾನಗಳ ಬಗ್ಗೆ ಪ್ರಾಯೋಗಿಕ ಜ್ಞಾನವನ್ನು ಪಡೆಯುತ್ತಾರೆ.


