ಆ.16: ಆಲ್ ಇಂಡಿಯಾ ಮುಕ್ತ ಫಿಡೆ ರೇಟಿಂಗ್ ಚೆಸ್
ಮಂಗಳೂರು: ಕಿಂಗ್ಸ್ ಚೆಸ್ ಅಕಾಡೆಮಿ ಮಂಗಳೂರು ವತಿಯಿಂದ ಆ.16 ರಂದು ಮಂಗಳೂರಿನ ಉರ್ವ ಶ್ರೀ ಮಾರಿಯಮ್ಮ ಸಭಾಭವನದಲ್ಲಿ 13ನೇ ಕೆಸಿಎ ಟ್ರೋಫಿ ಆಲ್ ಇಂಡಿಯಾ ಮುಕ್ತ ಫಿಡೆ ರೇಟಿಂಗ್ ಚೆಸ್ ಟೂರ್ನಮೆಂಟ್ ಏರ್ಪಡಿಸಲಾಗಿದೆ.
ಬೆಳಗ್ಗೆ 8.30ಕ್ಕೆ ಉದ್ಘಾಟನೆ ನಡೆಯಲಿದ್ದು, ಶಾಸಕ ಡಿ. ವೇದವ್ಯಾಸ ಕಾಮತ್ ಸಹಿತ ಗಣ್ಯರು ಭಾಗವಹಿಸಲಿದ್ದಾರೆ. ಒಂದು ದಿನದ ಚೆಸ್ ಟೂರ್ನಮೆಂಟ್ನಲ್ಲಿ ಕರ್ನಾಟಕ ಸೇರಿದಂತೆ ಒಡಿಶಾ, ಕೇರಳ ಗೋವಾ, ಗುಜರಾತ್ ಸಹಿತ ವಿವಿಧ ರಾಜ್ಯಗಳಿಂದ 600ಕ್ಕೂ ಹೆಚ್ಚು ಚೆಸ್ ಆಟಗಾರರು ಭಾಗವಹಿಸುವ ನಿರೀಕ್ಷೆಯಿದೆ. ಫಿಡೆ ರೇಟಿಂಗ್ ಹೊಂದಿರುವ ಆಟಗಾರರು ಹಾಗೂ ಹೊಸ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಈ ಟೂರ್ನಮೆಂಟ್ ಉತ್ತಮ ವೇದಿಕೆಯಾಗಲಿದೆ ಎಂದು ಸಂಸ್ಥೆಯ ತರಬೇತುದಾರ ಪ್ರವೀಣ್ ಕಾಮತ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಟೂರ್ನಮೆಂಟ್ನಲ್ಲಿ ವಿವಿಧ ವಯೋಮಾನದ ವಿಭಾಗಗಳು ಹಾಗೂ ಮುಕ್ತ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ವಿಜೇತರಿಗೆ ಒಟ್ಟು 1,00,000 ರೂ. ನಗದು ಬಹುಮಾನಗಳು ಹಾಗೂ 153 ಆಕರ್ಷಕ ಟ್ರೋಫಿಗಳನ್ನು ನೀಡಲಾಗುವುದು. ಚೆಸ್ ಆಟವನ್ನು ಮಕ್ಕಳಲ್ಲಿ ಮತ್ತು ಯುವಕರಲ್ಲಿ ಇನ್ನಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ಕಿಂಗ್ಸ್ ಚೆಸ್ ಅಕಾಡೆಮಿ ನಿರಂತರವಾಗಿ ವಿವಿಧ ಚೆಸ್ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ದೇಶದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಟಗಾರರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಪ್ರಮುಖರಾದ ವಿಜಯರಾಜ್ ಪೈ, ಅನೂಪ್ ಕಾಮತ್, ಶರತ್ ಕುಮಾರ್, ವಿನಯ್ ಕಾಮತ್ ಉಪಸ್ಥಿತರಿದ್ದರು.