ದ.ಕ. ಜಿಲ್ಲೆಯಾದ್ಯಂತ ಬಿಟ್ಟು ಬಿಟ್ಟು ಸುರಿದ ಮಳೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರ ದಿನವಿಡೀ ಬಿಟ್ಟು ಬಿಟ್ಟು ಉತ್ತಮ ಮಳೆಯಾಗಿದೆ. ಗ್ರಾಮಿಣ ಬಾಗದಲ್ಲಿ ಬೆಳಗಿನ ಜಾವದಿಂದಲೇ ಆರಂಭವಾದ ಜಿಟಿಜಿಟಿ ಮಳೆ, ಸಂಜೆಯ ವೇಳೆಗೆ ಬಿರುಸು ಪಡೆದುಕೊಂಡಿತು. ಕರಾವಳಿ ತೀರಪ್ರದೇಶದಲ್ಲಿ ಸಂಜೆ ವೇಳೆ ಮಳೆಯ ಅಬ್ಬರ ಜೋರಿಯತ್ತು.
ಸೋಮವಾರ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ, ಚಾರ್ಮಾಡಿ ಘಾಟಿ ಪ್ರದೇಶ, ಸುಳ್ಯ, ಕಡಬ ಹಾಗೂ ಬೆಳ್ತಂಗಡಿ ಸೇರಿದಂತೆ ಪಶ್ಚಿಮ ಘಟ್ಟದ ತಳಭಾಗದ ಹಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿರುವ ವರದಿಯಾಗಿದೆ. ಮಂಗಳವಾರ ಗಡಿ ಜಿಲ್ಲೆ ಕಾಸರಗೋಡು ಸೇರಿದಂತೆ ಕರಾವಳಿಯ ಇತರೆಡೆಗಳಲ್ಲೂ ದಿನವಿಡೀ ಸೂರ್ಯನ ದರ್ಶನವೇ ಆಗದೆ, ಮೋಡ ಮುಸುಕಿದ ವಾತಾವರಣದೊಂದಿಗೆ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಹವಾಮಾನ ಇಲಾಖೆಯ ಪ್ರಸ್ತುತ ಮುನ್ಸೂಚನೆಗಳ ಪ್ರಕಾರ, ಕರಾವಳಿ ಭಾಗದಲ್ಲಿ ಮಳೆಯ ಅಬ್ಬರ ಮುಂದಿನ ದಿನಗಳಲ್ಲಿ ಕೊಂಚ ತಗ್ಗುವ ಲಕ್ಷಣಗಳಿವೆ.
ಸದ್ಯಕ್ಕೆ ಕರಾವಳಿಯಲ್ಲಿ ಭಾರಿ ಮಳೆಯ ಮುನ್ನೆಚ್ಚರಿಕೆ ಇಲ್ಲದಿದ್ದರೂ, ಘಟ್ಟ ಪ್ರದೇಶಗಳಲ್ಲಿ ಮತ್ತು ಸಮುದ್ರ ತೀರದಲ್ಲಿ ಗಾಳಿಯ ವೇಗ ಹೆಚ್ಚಿರಲಿದೆ. ಹೀಗಾಗಿ ಸಾರ್ವಜನಿಕರು ಹಾಗೂ ಮೀನುಗಾರರು ಜಾಗರೂಕರಾಗಿರಲು ಸೂಚಿಸಲಾಗಿದೆ. ರಾಜ್ಯದ ಕರಾವಳಿ ತೀರ ಭಾಗಗಳಲ್ಲಿ ಮಂಗಳವಾರ ಬಹುತೇಕ ಕಡೆ ಅನಿರೀಕ್ಷಿತವಾಗಿ ಉತ್ತಮ ಮಳೆಯಾಗಿದೆ. ಬುಧವಾರ ಉಡುಪಿ, ಕಾಸರಗೋಡು ಜಿಲ್ಲೆಯಲ್ಲಿ ಮಧ್ಯಾಹ್ನ ನಂತರ ಮಳೆ ಕಡಿಮೆಯಾಗುವ ಲಕ್ಷಣಗಳಿವೆ. ದಕ್ಷಿಣ ಕನ್ನಡದಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 12ರ ತನಕ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯ ಮುಂದುವರಿಯುವ ಸಾಧ್ಯತೆಗಳಿವೆ.
ಮುಂಗಾರು ದಿನ ಕಳೆದಂತೆ ದುರ್ಬಲ
ಫೆಸಿಫಿಕ್ ಸಾಗರದ ಜಪಾನ್ ನ ಆಗ್ನೇಯ ಭಾಗದಲ್ಲಿ ಅತಿ ಪ್ರಭಲ ಚಂಡಮಾರುತ ರೂಪುಗೊಂಡಿದ್ದರಿಂದ ಹಿಂದೂ ಮಹಾಸಾಗರದ ಆಸ್ಟ್ರೇಲಿಯಾ ಕಡೆಯಿಂದ ಅರಬ್ಬಿ ಸಮುದ್ರದ ಕಡೆಗೆ ಬೀಸುವ ಮಾರುತಗಳು ನೇರವಾಗಿ ಬಂಗಾಳಕೂಲ್ಲಿಯ ಮೂಲಕ ತೈವಾನ್, ಫಿಲಿಪ್ಪೀನ್ಸ್ ಕಡೆಗೆ ಸೆಳೆಯುತ್ತಿದೆ. ಇದರಿಂದ ಅರಬ್ಬಿ ಸಮುದ್ರದಲ್ಲಿ ಮುಂಗಾರು ದಿನ ಕಳೆದಂತೆ ದುರ್ಬಲಗೊಳ್ಳುವ ಸಾಧ್ಯತೆಗಳಿವೆ. ಈ ಪ್ರಭಲ ಚಂಡಮಾರುತವು ಜಪಾನ್ ದಕ್ಷಿಣ ಕರಾವಳಿ, ದಕ್ಷಿಣ ಕೊರಿಯಾ, ಚೀನಾ ಹಾಗೂ ತೈವಾನ್ ದೇಶಗಳಲ್ಲಿ ಭಾರಿ ಪ್ರಮಾಣದ ಅನಾಹುತಗಳನ್ನು ಸೃಷ್ಟಿ ಮಾಡಬಹುದು.