ಒತ್ತಡ ನಿರ್ವಹಣೆ ಸಾಧ್ಯವಾಗದೇ ಮಾದಕ ವಸ್ತು ವ್ಯಸನಕ್ಕೆ ಬಲಿ: ಡಾ. ಶ್ರೀನಿಧಿ ಶೆಟ್ಟಿ

ಒತ್ತಡ ನಿರ್ವಹಣೆ ಸಾಧ್ಯವಾಗದೇ ಮಾದಕ ವಸ್ತು ವ್ಯಸನಕ್ಕೆ ಬಲಿ: ಡಾ. ಶ್ರೀನಿಧಿ ಶೆಟ್ಟಿ


ಮಂಗಳೂರು: ಯುವ ಜನತೆ ಒತ್ತಡ ನಿವಾರಣೆ, ಸ್ನೇಹಿತರ ಒತ್ತಾಯದ ಮೇರೆಗೆ ಅಥವಾ ಭಾವನಾತ್ಮಾಕ ತೊಳಲಾಟದ ಸಂದರ್ಭಕ್ಕೆ ಗುರಿಯಾಗಿ ಮಾದಕ ವಸ್ತು ಸೇವನೆ ಆರಂಭಿಸುತ್ತಾರೆ ಎಂದು ಕೆ. ಎಸ್. ಹೆಗ್ಡೆ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದ ಡಾ. ಶ್ರೀನಿಧಿ ಶೆಟ್ಟಿ ಹೇಳಿದರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾ ಭವನದಲ್ಲಿ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗ, ಸಂಸ್ಥೆಯ ನಾವೀನ್ಯತಾ ಮಂಡಳಿ (ಐಐಸಿ), ಯುವ ರೆಡ್ಕ್ರಾಸ್, ಇನ್ನರ್ ವ್ಹೀಲ್ ಕ್ಲಬ್ ಮಂಗಳೂರು ದಕ್ಷಿಣ ಮತ್ತು ಆಂತರಿಕ ಗುಣಮಟ್ಟ ಖಾತ್ರಿಕೋಶದ ವತಿಯಿಂದ ಆಯೋಜಿಸಲಾಗಿದ್ದ ಆರೋಗ್ಯಕರ ಜೀವನಕ್ಕೆ ಮಾದಕ ವ್ಯಸನ ಜಾಗೃತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. 

ಮಾದಕ ವಸ್ತು ಸೇವನೆ ಮೋಜಿನ ಕಾರಣಕ್ಕಾಗಿ ಆರಂಭವಾಗಿ ಚಟವಾಗಿ ಬದಲಾಗುವ ಅಪಾಯ ಹೆಚ್ಚಿರುತ್ತದೆ. ಇದು ಹಾನಿಕಾರಕವಾಗಿದ್ದು, ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ದೇಹ ಮತ್ತು ಮನಸ್ಸು ತನ್ನ ಸ್ಥಿಮಿತ ಕಳೆದುಕೊಂಡು, ಮನಸ್ಸು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ವಿಫಲವಾಗತ್ತದೆ. ಅಲ್ಲದೇ, ಮಾದಕ ವಸ್ತುವಿನ ಮೇಲೆ ಅವಲಂಬಿತರಾಗಿ ಸಂಪೂರ್ಣವಾಗಿ ಮಾದಕ ವಸ್ತುಗಳ ದಾಸರಾಗಿ ಬಿಡುತ್ತಾರೆ ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯವಂತ ನಾಯಕ್, ವಿದ್ಯಾರ್ಥಿಗಳು ಒತ್ತಡ ನಿವಾರಣೆಗಾಗಿ ಮಾದಕ ವಸ್ತು ಸೇವನೆಯಂತಹ ಒಳದಾರಿಗಳನ್ನು ಅವಲಂಬಿಸದೇ, ಮಾನಸಿಕ ಸದೃಢತೆಯನ್ನು ಕಾಪಾಡಿಕೊಳ್ಳಬೇಕಿದೆ. ಆ ಮೂಲಕ ಮಾದಕ ವಸ್ತು ವ್ಯಸನದ ಸುಳಿಗೆ ಸಿಲುಕದಿರುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 

ಐಸಿಸಿ ಅಧ್ಯಕ್ಷೆ ಹಾಗೂ ಯುವ ರೆಡ್ಕ್ರಾಸ್ ಕಾರ್ಯಕ್ರಮ ಅಧಿಕಾರಿ ಡಾ. ಭಾರತಿ ಪಿಲಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇನ್ನರ್ ವ್ಹೀಲ್ ಕ್ಲಬ್ (ದಕ್ಷಿಣ)ನ ಅಧ್ಯಕ್ಷೆ ಕವಿತಾ ಕಾಮತ್ ವಂದಿಸಿದರು.

ಈ ಸಂದರ್ಭದಲ್ಲಿ ಗಣಕಯಂತ್ರ ವಿಭಾಗದ ಮುಖ್ಯಸ್ಥ ಡಾ. ವೀರಭದ್ರಪ್ಪ, ಐಕ್ಯುಎಸಿ ಸಂಯೋಜಕ ಡಾ. ಸಿದ್ದರಾಜು ಎಂ.ಎನ್. ಸೇರಿದಂತೆ ನಾನಾ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article